ಶಿವಮೊಗ್ಗ: ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ, ಮೂಢನಂಬಿಕೆ ಹೊಡೆದೊಡಿಸಬೇಕಾದ ಕಾಲೇಜಿ ನಲ್ಲಿಯೇ ವಿದ್ಯಾರ್ಥಿಗಳಿಗೆ ದೇವರ ಹೆಸರಿನಲ್ಲಿ ಬೆದರಿಕೆ ಒಡ್ಡಿದ ಪ್ರಕಟಣೆವೊಂದು ಸೂಚನಾ ಫಲಕದಲ್ಲಿ ಕಂಡುಬಂದಿದೆ.
ನಗರದ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳ ಸೂಚನಾ ಫಲಕದಲ್ಲಿ ವಿಶೇಷ ಸೂಚನೆ ಎಂಬ ತಲೆಬರಹದಲ್ಲಿ, `ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಡಿಜಿಟಲ್ ಕ್ಯಾಮೆರಾ ಕಳೆದು ಹೋಗಿದ್ದು, ಇದನ್ನು ಸಿಕ್ಕವರು ಅದನ್ನು ಹಿಂದಕ್ಕೆ ನೀಡಬೇಕು; ಇಲ್ಲದಿದ್ದರೆ ಕಲ್ಲು ಕುಟೀಕ, ಭೂತಪ್ಪ, ಸಿಗಂಧೂರು ಚಾಮುಂಡೇಶ್ವರಿಗೆ ಹರಕೆ ಮಾಡಿದ್ದು, ತೊಂದರೆಗೆ ಗುರಿಯಾಗಬೇಕಾಗುತ್ತದೆ~ ಎಂದು ಎಚ್ಚರಿಕೆಯ ಸಂದೇಶ ನೀಡಲಾಗಿದೆ.
ಸಿಕ್ಕವರು ಈ ಕೆಳಗಿನ ಸಂಬಂಧಪಟ್ಟವರಿಗೆ ತಲುಪಿಸಬೇಕು ಎಂದು ಎರಡು ಮೊಬೈಲ್ ನಂಬರ್ಗಳನ್ನು ಹಾಕಲಾಗಿದೆ. ಈ ಪ್ರಕಟಣೆಗೆ ಕಾಲೇಜಿನ ಪ್ರಾಂಶುಪಾಲರ ಸಹಿ ಇಲ್ಲ. ಆದರೂ, ಬೀಗ ಹಾಕಿರುವ ಸೂಚನಾ ಫಲಕದ ಒಳಗೆ ಪ್ರಕಟಣೆ ಹೇಗೆ ನುಸುಳಿತು ಎಂಬುದು ಮಾತ್ರ ನಿಗೂಢವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.