ಶಿವಮೊಗ್ಗ: ನಾಟ್ಯಶ್ರೀ ಕಲಾ ತಂಡ, ಮಾರ್ಚ್ 3 ಮತ್ತು 4ರಂದು `ಯಕ್ಷ ಬಸವ ಉತ್ಸವ-2012~ವನ್ನು ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದೆ.
`ಜಗಜ್ಯೋತಿ ಬಸವೇಶ್ವರ ಚರಿತ್ರೆ~ ಯಕ್ಷಗಾನದ 100ನೇ ಪ್ರದರ್ಶನ, ಯಕ್ಷ ಬಸವ ಪ್ರಶಸ್ತಿ, ನಾಟ್ಯಶ್ರೀ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮ, ವಚನ ವೈಭವ, ಯಕ್ಷನೃತ್ಯ, ವಚನ ಗಾಯನ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
3ರಂದು ಮಧ್ಯಾಹ್ನ 3ಕ್ಕೆ ರಾಮಚಂದ್ರಪುರ ಮಠದ ಮದ್ರಾಘವೇಶ್ವರ ಭಾರತಿ ಸ್ವಾಮೀಜಿ ಯಕ್ಷ ಬಸವ ಉತ್ಸವ ಉದ್ಘಾಟಿಸುವರು. ಯಕ್ಷ ಬಸವ ಸಾಕ್ಷ್ಯಚಿತ್ರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಯಕ್ಷ ಬಸವ ಸ್ಮರಣ ಸಂಚಿಕೆಯನ್ನು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಬಿಡುಗಡೆ ಮಾಡುವರು. ಇದೇ ಸಂದರ್ಭದಲ್ಲಿ `ಯಕ್ಷ ಬಸವ ಪ್ರಶಸ್ತಿ~ ಪ್ರದಾನ ನಡೆಯಲಿದೆ ಎಂದು ವಿವರಿಸಿದರು.
ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಉದ್ಯಮಿಗಳು, ಮುಖಂಡರು ಪಾಲ್ಗೊಳ್ಳುವರು. ವಿಶೇಷ ಆಹ್ವಾನಿತರಾಗಿ ಧಾರವಾಡ ರಂಗಾಯಣ ನಿರ್ದೇಶಕ ಏಣಗಿ ನಟರಾಜ್, ಶಿವಮೊಗ್ಗ ರಂಗಾಯಣ ನಿರ್ದೇಶಕ ಹೊ.ನ. ಸತ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಘುರಾಮ ದೇವಾಡಿಗ, ಎಸ್.ವಿ. ತಿಮ್ಮಯ್ಯ ಮತ್ತಿತರರು ಭಾಗವಹಿಸುವರು ಎಂದರು.
ಅಂದು ಸಂಜೆ 6ಕ್ಕೆ ಕಲಾವಿದರಾದ ಹುಮಾಯುನ್ ಹರ್ಲಾಪುರ, ನಾಗಭೂಷಣ ಹೆಗಡೆ, ಶಿವಕುಮಾರ ಮಹಾಂತ, ನೌಷಾದ್, ನಿಷಾದ್ ಹರ್ಲಾಪುರ, ವಸುಧಾ ಶರ್ಮ, ಗಣೇಶ್ ಗುಂಟ್ಕಲ್, ಪ್ರಕಾಶ್ ಹೆಗಡೆ, ನವ್ಯಾ ಭಟ್ ಮತ್ತಿತರರಿಂದ ವಚನ ಗಾಯನ ಏರ್ಪಡಿಸಲಾಗಿದೆ ಎಂದು ಹೇಳಿದರು.
ಅಂದು ಸಂಜೆ 7ಕ್ಕೆ `ಜಗಜ್ಯೋತಿ ಬಸವೇಶ್ವರ ಚರಿತ್ರೆ~ ಯಕ್ಷಗಾನದ 100ನೇ ಪ್ರದರ್ಶನ ನಡೆಯಲಿದೆ. ರಾತ್ರಿ 8.30ರಿಂದ 9.30ರವರೆಗೆ ಶ್ರೀಕ್ಷೇತ್ರ ಬಂಗಾರಮಕ್ಕಿಯ ವೀರಾಂಜನೇಯ ಯಕ್ಷಮಿತ್ರ ಮಂಡಳಿಯಿಂದ `ಮೋಹಿನಿ ಭಸ್ಮಾಸುರ~ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.
ಮಾರ್ಚ್ 4ರಂದು ಬೆಳಿಗ್ಗೆ 10ರಿಂದ 11ರವರೆಗೆ ಸಹನಾ ಪ್ರಭು ಮತ್ತು ತಂಡದಿಂದ `ವಚನ ವೈಭವ~, ಮಧ್ಯಾಹ್ನ 11ಕ್ಕೆ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೊಳಗಿ ಕೇಶವ ಹೆಗಡೆ ಮತ್ತಿತರರಿಂದ `ಯಕ್ಷನೃತ್ಯ~, ಮಧ್ಯಾಹ್ನ 2ಕ್ಕೆ ಗುರುಗುಹ ಸಂಗೀತ ವಿದ್ಯಾಲಯದಿಂದ ವಚನ ಗಾಯನ ಏರ್ಪಡಿಸಲಾಗಿದೆ. ಮಧ್ಯಾಹ್ನ 3ಕ್ಕೆ ಹಮ್ಮಿಕೊಂಡಿರುವ ಸಮಾರೋಪ ಸಮಾರಂಭದಲ್ಲಿ ನಾಟ್ಯಶ್ರೀ ಪುರಸ್ಕಾರ, ಸಾಧಕ ಸನ್ಮಾನ ಮತ್ತಿತರ ಕಾರ್ಯಕ್ರಮಗಳನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ನಡೆಸಿಕೊಡುವರು. ವಿವಿಧ ಮಠಗಳ ಸ್ವಾಮೀಜಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ವಿವರಿಸಿದರು.
ಚಲನಚಿತ್ರ ನಟ ಶ್ರೀನಾಥ, ವಚನ ಸಾಹಿತ್ಯ ವಾಗ್ಮಿ ಡಾ.ಸಿ.ಸೋಮಶೇಖರ್, ಜಾನಪದ ವಿದ್ವಾಂಸ ಎನ್. ಹುಚ್ಚಪ್ಪ ಮಾಸ್ತರ್, ಭಾಗವತ ಕೊಳಗಿ ಕೇಶವ ಹೆಗಡೆ, ಕಲಾವಿದ ಬೆಂಗೇರಿ ಬಸವರಾಜ್ ಅವರಿಗೆ ನಾಟ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 5.30ಕ್ಕೆ ಉಸ್ತಾದ್ ಫಯಾಜ್ ಖಾನ್ ಮತ್ತು ತಂಡದಿಂದ ದಾಸವಾಣಿ ಮತ್ತು ವಚನಗಾಯನ ಹಮ್ಮಿಕೊಳ್ಳಲಾಗಿದೆ. ಸಂಜೆ 7.30ರಿಂದ ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ `ರಾಜಾ ಉಗ್ರಸೇನ~ ಯಕ್ಷಗಾನ ಪ್ರದರ್ಶನವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿದ್ವಾನ್ ದತ್ತಮೂರ್ತಿ ಭಟ್, ಎಪಿಎಂಸಿ ಅಧ್ಯಕ್ಷ ಜ್ಯೋತಿಪ್ರಕಾಶ್, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲ ಮಹದೇವಪ್ಪ, ಕಸ್ತೂರ ಬಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಎನ್. ಕೃಷ್ಣಮೂರ್ತಿ, ಹವ್ಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಈಶ್ವರಪ್ಪ, ಶ್ರೀಪಾದ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.