ಹೊಸನಗರ: ತಾಲ್ಲೂಕು ಕಚೇರಿಯಲ್ಲಿ ಇರುವ ಕಂಪ್ಯೂಟರ್ ನಿರಂತರ ದುರಸ್ತಿಯಲ್ಲಿ ಇರುವ ಕಾರಣ ನೆಮ್ಮದಿ ಕೇಂದ್ರದಲ್ಲಿ ದಾಖಲೆಗಾಗಿ ಗಂಟೆಗಟ್ಟಲೆ ಮಳೆಯಲ್ಲಿ ಕಾಯುವ ಸ್ಥಿತಿ ಬಂದಿದೆ.
ಸಬ್ಸಿಡಿ ದರದ ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕ, ಅಡಿಕೆ ಕೊಳೆರೋಗಕ್ಕೆ ಮೈಲುತುತ್ತಾ, ಕೃಷಿ ಉಪಕರಣ ಹೀಗೆ ಎಲ್ಲಾ ಸರ್ಕಾರಿ ಸವಲತ್ತು ಪಡೆಯಲು ಪಹಣಿ (ಆರ್ಟಿಸಿ) ಬೇಕೇಬೇಕು. ಆದರೆ, ವಾರದಲ್ಲಿ 2 ದಿನ ಮಾತ್ರ ಕೆಲಸ ನಿರ್ವಹಿಸುತ್ತಿದ್ದ ತಾಲ್ಲೂಕು ಕಚೇರಿಯಲ್ಲಿ ಇರುವ ಕಂಪ್ಯೂಟರ್ ಕಳೆದ 2 ವಾರಗಳಿಂದ ಅದೂ ಸಹ ಮಾಡುತ್ತಿಲ್ಲದ ಕಾರಣ ಸರ್ಕಾರಿ ದಾಖಲೆ ಪಡೆಯಲು ನೆಮ್ಮದಿ ಕೇಂದ್ರದಲ್ಲಿ ನೂಕುನುಗ್ಗಲು ಆಗಿದೆ ಎಂಬುದು ಸಾರ್ವಜನಿಕರ ದೂರು.
ಶಾಲಾ ದಾಖಲಾತಿ, ಜಾತಿ ಮತ್ತು ಆದಾಯ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ವಿಧವಾ ವೇತನ, ಹಿರಿಯ ನಾಗರಿಕ ದೃಢೀಕರಣ ಪಡೆಯಲು, ಇದರ ಜತೆಗೆ ಸರ್ಕಾರಿ ಕೆಲಸಕ್ಕೆ ಅರ್ಜಿ ಗುಜರಾಯಿಸಲು ಕಂದಾಯ ಇಲಾಖೆಯ ನಿರ್ಲಕ್ಷ್ಯದ ಕಾರಣ ಇರುವ ಒಂದೇ ನೆಮ್ಮದಿ ಕೇಂದ್ರಕ್ಕೆ ದೌಡಾಯಿಸಬೇಕಾದ ಪರಿಸ್ಥಿತಿ ಬಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಂಪ್ಯೂಟರ್ ವ್ಯವಸ್ಥೆಯನ್ನು ಕೂಡಲೇ ದುರಸ್ತಿ ಮಾಡಬೇಕು ಎಂಬುದು ರೈತರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.