ADVERTISEMENT

ನೈಜ ಚಿತ್ರಣದ ವರದಿ ಸಲ್ಲಿಕೆ ಭರವಸೆ

ಸಾಗರ, ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನಲ್ಲಿ ಕೇಂದ್ರ ತಂಡದ ಅತಿವೃಷ್ಟಿ ಹಾನಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 6:49 IST
Last Updated 26 ಸೆಪ್ಟೆಂಬರ್ 2013, 6:49 IST

ತೀರ್ಥಹಳ್ಳಿ:  ಅತಿವೃಷ್ಟಿಯಿಂದ ಹಾನಿಗೆ ಒಳಗಾದ ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಕೇಂದ್ರದ ವೀಕ್ಷಕರ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸಾಗರದಿಂದ ತೀಥರ್ಹಳ್ಳಿಗೆ ಆಗಮಿಸಿದ ಜೇಕಬ್‌ ನೇತೃತ್ವದ ಮೂವರನ್ನು  ಒಳಗೊಂಡ ತಂಡ ಆರಂಭದಲ್ಲಿ ಆರಗ ಗ್ರಾಮ ಪಂಚಾಯ್ತಿ ವ್ಯಾಪಿ್ತಯ ಕುಣಿಗದ್ದೆಯಲ್ಲಿ ಗೋಪಿನಾಥ ಹಳ್ಳದಿಂದ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕುಣಿಗದ್ದೆ ಗ್ರಾಮದಲ್ಲಿ  ಗೋಪಿನಾಥ ಹಳ್ಳದ ದಂಡೆ ಒಡೆದಿರುವುದರಿಂದ ಕೃಷಿ ಜಮೀನಿಗೆ ಮಳೆ ನೀರು ನುಗ್ಗಿರುವುದರಿಂದ ಅಪಾರ ಪ್ರಮಾಣದ ಭತ್ತದ ಗದ್ದೆಗಳು ಹಾಳಾಗಿರುವುದನ್ನು ತಂಡ ಪರಿಶೀಲಿಸಿತು. ಪ್ರವಾಹ ವಿಕೋಪ ನಿಧಿಯಡಿಯಲ್ಲಿ ಹಳ್ಳದ ದಂಡೆ ದುರಸ್ತಿಗೆ ವಿನಿಯೋಗಿಸಿರುವ  ` 50 ಲಕ್ಷದ ಕಾಮಗಾರಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿತು. ತಡೆಗೋಡೆ ಕಾಮಗಾರಿಯನ್ನು ಸರಿಯಾಗಿ ನೆರವೇರಿಸಿದ್ದರೆ ಇಂಥಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ತಂಡ ಅಭಿಪ್ರಾಯ ವ್ಯಕ್ತಪಡಿಸಿತು.

ಮಿಟ್ಲಗೋಡು ಗ್ರಾಮದ ರೈತ ಮಹಿಳೆ  ಕೃಷ್ಣಮ್ಮ ಅವರು ಈ ಹಿಂದೆ ಅರುಣಗಿರಿ ದೇವಸ್ಥಾನಕ್ಕೆ ಹೋಗಲು ರಸ್ತೆ ಸಿದ್ಧಗೊಳಿಸಲು 1 ಎಕರೆ 20 ಗುಂಟೆ ಪ್ರದೇಶವನ್ನು ಬಿಟ್ಟುಕೊಟ್ಟಿದ್ದರು. ಆ ಸಂದಭರ್ದಲ್ಲಿ ಅವರ ಜಮೀನಿಗೆ ತಡೆಗೋಡೆ ಮಾಡಿಕೊಡುವ ಭರವಸೆ ನೀಡಿದ್ದರು. ಈ ಬಾರಿ ಸುರಿದ ಮಳೆಯಿಂದ ತಡೆಗೋಡೆ ಒಡೆದು ಜಮೀನು ಹಾಳಾಗಿರುವ ಕುರಿತು ಕೃಷ್ಣಮ್ಮ ವೀಕ್ಷಕರ ತಂಡದ ಬಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಭೇಟಿ ನೀಡಿದ ಆಗುಂಬೆ ಹೋಬಳಿಯ ಗುಡ್ಡೇಕೇರಿ ಸಮೀಪ ತಲಗೇರಿ ಗೋಪಾಲಕೃಷ್ಣಭಟ್‌ ಅವರ ಅಡಿಕೆ ತೋಟಕ್ಕೆ ಭೇಟಿ ನೀಡಿದ ವೀಕ್ಷಕರ ತಂಡ ಅಡಿಕೆ ಕೊಳೆ ರೋಗದಿಂದ ಹಾನಿಯಾದ ಬೆಳೆ ಹಾಗೂ ಸಾಯುತ್ತಿರುವ ಅಡಿಕೆ ಮರಗಳನ್ನು ವೀಕ್ಷಣೆ ಮಾಡಿದರು.

ಕೇಂದ್ರದ ವೀಕ್ಷಣಾ ತಂಡದಲ್ಲಿ ಜಿಲ್ಲಾಧಿಕಾರಿ ವಿಫುಲ್‌ ಬನ್ಸಾಲ್‌, ಜಿಲ್ಲಾ ಪಂಚಾಯ್ತಿ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕುಮಾರ್‌ ಸಿಂಥೆಲ್‌ ಹಾಜರಿದ್ದರು. ತೀರ್ಥಹಳ್ಳಿ ವೀಕ್ಷಣೆ ನಂತರ ತಂಡ ಶೃಂಗೇರಿಗೆ ತೆರಳಿತು. ಕೇಂದ್ರದ ವೀಕ್ಷಕರ ತಂಡ ಭೇಟಿ ನೀಡುವ ಮಾಹಿತಿ ಗ್ರಾಮಸ್ಥರಿಗೆ ಇಲ್ಲದೇ ಇರುವುದರಿಂದ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪರಿಶೀಲನೆ
ಹೊಸನಗರ:
ಶಿವಮೊಗ್ಗ ಜಿಲ್ಲೆಯ ಅತಿವೃಷ್ಟಿ ಚಿತ್ರಣವು ಮನದಟ್ಟಾಗಿದೆ. ಈ ಕುರಿತಂತೆ ಯಥಾವತ್ತಾದ ವರದಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಕೇಂದ್ರ ಐಎಂಸಿಟಿ ತಂಡದ ಕೆ.ಎಸ್.ಜೆಕೇಬ್‌ ಭರವಸೆ ನೀಡಿದರು.

   ತಾಲ್ಲೂಕಿನ ನೆರೆಪೀಡಿತ ಪ್ರದೇಶಗಳ ಸಾಕ್ಷಾತ್‌ ಸಮೀಕ್ಷೆಯ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಿಸಾನ್‌ ವಿಭಾಗದ ಅಧ್ಯಕ್ಷ ನಗರದ ಮಹದೇವಪ್ಪ ಸಲ್ಲಿಸಿದ ಮನವಿಗೆ ಅವರು ಉತ್ತರಿಸಿದರು. 

  ನೆರೆ ಪೀಡಿತ ಪ್ರದೇಶಗಳಲ್ಲಿನ ಅಡಿಕೆ ತೋಟ, ಭತ್ತ, ಶುಂಠಿ, ಜೋಳದ ಫಸಲು ನಷ್ಟ, ರಸ್ತೆ, ಸೇತುವೆ ಹಾನಿ ಕುರಿತಂತೆ ಸಮೀಕ್ಷೆ ಮಾಡಲಾಗಿದೆ ಎಂದರು. ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸುಮಾರು ರೂ.200 ಕೋಟಿಯಷ್ಟು ನಷ್ಟ ಉಂಟಾಗಿದ್ದು, ಈ ಬಗ್ಗೆ ಕೃಷಿಕರ ಪರವಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಅವರು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಿಸಾನ್‌ ವಿಭಾಗದ ಕಾರ್ಯದರ್ಶಿ ಶಿವಮೂರ್ತಿ, ಸಂಚಾಲಕ ಅಬ್ಬಿಮಲ್ಲೇಶಪ್ಪ, ಜಿಲ್ಲಾಧಿಕಾರಿ ವಿಪುಲ್‌ ಬನ್ಸಾಲ್‌, ಉಪವಿಭಾಗಾಧಿಕಾರಿ ಉದಯಕುಮಾರ್‌ ಶೆಟ್ಟಿ, ತಹಶೀಲ್ದಾರ್‌ ಪಿ.ಸಿ. ಕುಲಕರ್ಣಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.