ADVERTISEMENT

ಪರಿಸರಕ್ಕೆ ಮಾರಕವಾದ ಗಣಿಗಾರಿಕೆ ವಿರೋಧಿಸಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 9:30 IST
Last Updated 15 ಮಾರ್ಚ್ 2012, 9:30 IST

ಹೊಸನಗರ: ವಿಶ್ವದ ಪರಿಸರ ಸೂಕ್ಷ್ಮ  ಪ್ರದೇಶವಾದ ಪಶ್ಚಿಮಘಟ್ಟದ ಉಳಿವಿಗೆ ಯುವ ಸಮುದಾಯ ಪಾತ್ರ ಮಹತ್ವದ್ದಾಗಿದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಹೇಳಿದರು.

ಬುಧವಾರ ತಾಲ್ಲೂಕಿನ ರಾಮಚಂದ್ರಾಪುರ ಮಠದಲ್ಲಿ ಪಶ್ಚಿಮಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ, ಕುವೆಂಪು ವಿವಿ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಗ್ರಾಮಭಾರತಿ ಟ್ರಸ್ಟ್ ಆಶ್ರಯದಲ್ಲಿ `ಪಶ್ಚಿಮಘಟ್ಟ ಸಂರಕ್ಷಣೆಗಾಗಿ ವಿಧ್ಯಾರ್ಥಿ ಯುವಜನತೆ~ ರಾಜ್ಯಮಟ್ಟದ 3 ದಿನಗಳ ಪರಿಸರ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪಶ್ಚಿಮಘಟ್ಟದ ಮೇಲಿನ ಪರಿಸರಕ್ಕೆ ಮಾರಕವಾದ ಗಣಿಗಾರಿಕೆ, ಅಭಿವೃದ್ಧಿ ಯೋಜನೆಗಳನ್ನು ಸತ್ಯಾಗ್ರಹದ ಮೂಲಕ ವಿರೋಧಿಸಲು ಯುವಪೀಳಿಗೆ ಸಜ್ಜಾಗಬೇಕು ಹೊರತು ಈ ಪ್ರದೇಶದ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ನಕ್ಸಲ್ ವಾದವನ್ನು ಅವರು ಈ ಸಂದರ್ಭದಲ್ಲಿ ಖಂಡಿಸಿದರು.

ದಕ್ಷಿಣ ಭಾರತಕ್ಕೆ ನೀರುಣಿಸುವ ಪಶ್ಚಿಮ-ಪೂರ್ವಘಟ್ಟಗಳ ಮೇಲೆ ಅನೇಕ ವಿವಿಧ ಒತ್ತಡಗಳು ಹೆಚ್ಚಾಗುತ್ತಿರುವ ಪರಿಣಾಮ 22 ಪ್ರಮುಖ ನದಿ ಹಾಗೂ 180 ಉಪ ನದಿಗಳ ನೀರಿನ ಸೆಲೆ ಬರಿದಾಗುತ್ತಿದೆ ಎಂದು ವಿಷಾದಿಸಿದರು.

ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಪರಿಸರ ಕಾಳಜಿಯನ್ನು ವಿದ್ಯಾರ್ಥಿ ದಿಸೆಯಿಂದಲೇ ಬೆಳೆಸಿಕೊಳ್ಳುವಂತೆ ಮನವಿ ಮಾಡಿದರು.

ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ, ತಾ.ಪಂ. ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಕೊಡಚಾದ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವನಂಜಪ್ಪ, ಸಹಾಯಕ ಅರಣ್ಯ ಸಂಕ್ಷಣಾಧಿಕಾರಿ ಬಿ. ಹುಚ್ಚಯ್ಯ, ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯ ಪ್ರೊ.ಬಿ.ಎಂ. ಕುಮಾರಸ್ವಾಮಿ, ಕುವೆಂಪು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ  ಡಾ.ಕುಂದನ್ ಬಸವರಾಜ್, ಶ್ರೀಮಠದ ಸಂಪೆಕಟ್ಟೆ ಕುಮಾರ್ ಹಾಜರಿದ್ದರು.

ಕುವೆಂಪು ವಿಶ್ವವಿದ್ಯಾಯಲದ ರಾಷ್ಟ್ರೀಯ ಸೇವಾ ಯೋಜನೆಯ ಸುಮಾರು 140ಕ್ಕೂ ಹೆಚ್ಚು ವಿದ್ಯಾರ್ಥಿಗಳು 3 ದಿನಗಳ ರಾಜ್ಯಮಟ್ಟದ ಪರಿಸರ ಅಧ್ಯಯನದಲ್ಲಿ ಭಾಗವಹಿಸಿದ್ದರು.

ಪ್ರೊ.ನಳಿನಚಂದ್ರ ಸ್ವಾಗತಿಸಿದರು. ಹನಿಯಾ ರವಿ, ಪ್ರೊ.ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಬಿ.ಎಚ್. ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಪರಿಸರ ನಾಗರಾಜ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.