ADVERTISEMENT

ಬತ್ತಕ್ಕೆ ವೈಜ್ಞಾನಿಕ ಬೆಲೆ: ರೈತ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 10:10 IST
Last Updated 1 ಜೂನ್ 2011, 10:10 IST

ಶಿವಮೊಗ್ಗ: ಬತ್ತಕ್ಕೆ ವೈಜ್ಞಾನಿಕ ಬೆಲೆ ನೀಡಿ, ಖರೀದಿ ಕೇಂದ್ರ ತೆರೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮಹಾಪ್ರಧಾನ ಕಾರ್ಯದರ್ಶಿ ಎಚ್.ಆರ್. ಬಸವರಾಜಪ್ಪ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.

ಬತ್ತ ಬೆಳೆಯುವುದು ಕೃಷಿ ಕಾರ್ಮಿಕರ ತೊಂದರೆಯಿಂದ ಬಹಳ ಕಷ್ಟದಾಯಕವಾಗಿದೆ. ಈಸಂದರ್ಭದಲ್ಲಿಯೂ ರೈತರು ಹೆಚ್ಚಿಗೆ ಕೂಲಿ ಕೊಡುತ್ತಿದ್ದಾರೆ. ಈ ಮಧ್ಯೆ ರಸಗೊಬ್ಬರ ಕಳೆದ ವರ್ಷಕ್ಕಿಂತ ಈ ವರ್ಷ ಡಿಎಪಿಗೆ 2,800,ರೂ 12.32.16ಕ್ಕೆ ರೂ 2,000, 20.20ಬೆಲೆ ರೂ1,900ಗೆ ಕೊಂಡು ಬೆಳೆದ ಪರಿಣಾಮ ಎಕರೆಗೆ ರೂ 20ರಿಂದ 22ಸಾವಿರ ಖರ್ಚು ಆಗುತ್ತದೆ.

1 ಕ್ವಿಂಟಲ್ ಬತ್ತ ಬೆಳೆಯಲು ರೂ 1,800  ರೈತನಿಗೆ ಖರ್ಚಾಗುತ್ತದೆ. ಸರ್ಕಾರದ 12 ಕೃಷಿ ಸಂಶೋಧನಾ ಕೇಂದ್ರಗಳಲ್ಲಿಯೂ ಬತ್ತ ಬೆಳೆಯುವ ವೆಚ್ಚ ರೂ 1,480 ಎಂದು ತಿಳಿಸಿದೆ. ರಾಜ್ಯದ ರಾಯಚೂರು, ಬಳ್ಳಾರಿ, ದಾವಣಗೆರೆ, ಹಾವೇರಿ, ಶಿವಮೊಗ್ಗ, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಯಥೇಚ್ಛವಾಗಿ ಬತ್ತ ಬೆಳೆದಿದ್ದಾರೆ. ಸುಗ್ಗಿ ಕಾಲವಾಗಿದ್ದಾಗ ಮಾರುಕಟ್ಟೆಯಲ್ಲಿರೂ 800ಗಳಿಂದ ರೂ 1ಸಾವಿರ ಧಾರಣೆ ಇದೆ. ಆದರೆ, ಈ ಧಾರಣೆ ರೈತ ಮಾಡಿದ ಖರ್ಚಿಗಿಂತ ಕಡಿಮೆ ಇದೆ ಎಂದು ಅವರು ಅಸಮಾಧಾನ  ವ್ಯಕ್ತಪಡಿಸಿದ್ದಾರೆ.

ಸರ್ಕಾರ ಸಬ್ಸಿಡಿ ಕೊಟ್ಟು ಬಡ್ಡಿ ಕಡಿಮೆ ಮಾಡಿದರೂ ಪ್ರಯೋಜನವಿಲ್ಲ. ಸಬ್ಸಿಡಿಗಳನ್ನು ಕೊಡುವುದರ ಬದಲು ವೈಜ್ಞಾನಿಕ ಬೆಲೆ ಕೊಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಹೇಳುತ್ತಾ ರೈತನ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶ ಸರ್ಕಾರ ರೈತರಿಂದ ಬತ್ತ ಖರೀದಿಸಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ಬಳಸುತ್ತಿದೆ. ಕರ್ನಾಟಕ ಸರ್ಕಾರ ಪಂಜಾಬ್ ರಾಜ್ಯದಿಂದ ಬತ್ತ ಖರೀದಿಸುವ ಬದಲು ನಮ್ಮ ರಾಜ್ಯದಲ್ಲಿಯೇ ಬತ್ತ ಖರೀದಿಸಬೇಕು. ಅಲ್ಲದೇ, ಕೇರಳ ಸರ್ಕಾರ ಪ್ರೋತ್ಸಾಹಧನವಾಗಿ ರೂ240 ನೀಡುತ್ತಿದೆ. ಕರ್ನಾಟಕದಲ್ಲಿಯೂ ಇದನ್ನು ನೀಡಬೇಕು. ಕೇಂದ್ರ ಸರ್ಕಾರ ಸಹ ರಾಜ್ಯಗಳಿಗೆ ಬೆಂಬಲ ಬೆಲೆಯಡಿ ಬತ್ತ ಖರೀದಿಸಲು ಅನುಮತಿ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.