ADVERTISEMENT

`ಬಿಜೆಪಿ ನೆಲಕಚ್ಚಿದ ಸಂಘಟನೆ'

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 9:47 IST
Last Updated 19 ಡಿಸೆಂಬರ್ 2012, 9:47 IST

ಸಾಗರ: ಮತ್ತೊಂದು ಪಕ್ಷದ ಸಮಾವೇಶದಲ್ಲಿ ಸಚಿವರು ಬಹಿರಂಗವಾಗಿ ಕಾಣಿಸಿಕೊಂಡರೂ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗದ ಬಿಜೆಪಿ ಪಕ್ಷ ನೈತಿಕವಾಗಿ ನೆಲಕಚ್ಚಿದ ರಾಜಕೀಯ ಸಂಘಟನೆಯಾಗಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಟೀಕಿಸಿದರು.

ತಾಲ್ಲೂಕಿನ ಯಲಕುಂದ್ಲಿ ಗ್ರಾಮದಲ್ಲಿ ಈಚೆಗೆ ನಡೆದ ತಾಳಗುಪ್ಪ ಹೋಬಳಿಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ಬೆಂಬಲಿಗರಿಗೆ ರಾಜಿನಾಮೆ ನೀಡಬೇಡಿ ಎಂದು ಸೂಚಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯನ್ನು ಬೆದರಿಸುವ ತಂತ್ರ ಹೂಡಿದ್ದಾರೆ ಎಂದರು.

ರಾಜ್ಯದಲ್ಲಿ ಕೆಜೆಪಿಯಿಂದ ರಾಜಕೀಯ ಅಸ್ಥಿರತೆ ಮೂಡಿದೆ. ಇದರ ಫಲವಾಗಿ ಸರ್ಕಾರದಲ್ಲಿ ಜನರ ಯಾವುದೇ ಕೆಲಸ ಆಗುತ್ತಿಲ್ಲ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ವಿಧಾನಸಭೆ ವಿಸರ್ಜಿಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟರು.

ಆಡಳಿತದಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ. ಬಿಜೆಪಿ ಆಡಳಿತದಿಂದ ರಾಜ್ಯದ ಜನ ಭ್ರಮನಿರಸನಗೊಂಡಿದ್ದು, ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಾರಾಯಣ್, ಸುಮಂಗಲಾ ರಾಮಕೃಷ್ಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಪಕ್ಷದ ಮುಖಂಡರಾದ ಮಂಡಗಳಲೆ ಹುಚ್ಚಪ್ಪ, ಎಚ್.ಎನ್. ದಿವಾಕರ್, ದಿನೇಶ್ ಬರದವಳ್ಳಿ, ಉಮೇಶ್ ಕಾಗೋಡು, ಸೋಮಶೇಖರ್ ಬರದವಳ್ಳಿ, ತಬಲಿ ಬಂಗಾರಪ್ಪ, ರಾಮಕೃಷ್ಣ ಹಿರೇನೆಲ್ಲೂರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.