ADVERTISEMENT

ಬೇಳೂರ್‌ಗೆ ನಾಲಿಗೆ ಮೇಲೆ ಹಿಡಿತ ಇರಲಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 10:10 IST
Last Updated 8 ಜನವರಿ 2011, 10:10 IST

ಹೊಸನಗರ: ‘ನಾಲಿಗೆ ಇದೆ ಅಂತ ಹಗುರವಾಗಿ ಮಾತನಾಡುವುದನ್ನು ಅನರ್ಹ ಶಾಸಕ ಗೋಪಾಲಕೃಷ್ಣ ಬೇಳೂರು ನಿಲ್ಲಿಸಬೇಕು’ ಎಂದು ಸಂಸದ ಬಿ.ವೈ. ರಾಘವೇಂದ್ರ ಸಲಹೆ ನೀಡಿದರು.
ಶುಕ್ರವಾರ ಸಮೀಪದ ಶ್ರೀರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹೊಸನಗರ ತಾಲ್ಲೂಕಿನಲ್ಲಿ ಬೇಳೂರು ಬೆಂಬಲ ಇಲ್ಲದೇ ಬಿಜೆಪಿ ಜಯಭೇರಿ ಬಾರಿಸಿರುವುದು ಅವರ ಗಮನಕ್ಕೆ ಬಂದಿಲ್ಲ ಅಂತ ಕಾಣುತ್ತೆ ಎಂದು ವ್ಯಂಗ್ಯವಾಡಿದರು.

ಸಾಗರ ತಾಲ್ಲೂಕಿನಲ್ಲಿ ಬಿಜೆಪಿ ಸೋಲು ಕಂಡಿದ್ದರೂ, ಕಳೆದ ಚುನಾವಣೆಯಲ್ಲಿ ಕೇವಲ ಶೇ. 8ರಷ್ಟು ಇದ್ದ ಬಿಜೆಪಿ ಮತಗಳು ಈ ಸಾಲಿನಲ್ಲಿ ಶೇ. 40ಕ್ಕೆ ಏರಿದೆ ಎಂಬುದನ್ನು ಟೀಕೆ ಮಾಡುವವರು ಗಮನಿಸಬೇಕು ಎಂದು ಪ್ರತ್ಯುತ್ತರ ನೀಡಿದರು. ಹೊಸನಗರ ತಾಲ್ಲೂಕು ಪಂಚಾಯ್ತಿಯ 11ರಲ್ಲಿ 8 ಸ್ಥಾನ ಬಿಜೆಪಿ ಪಾಲಾಗಿದೆ. 3 ಜಿ.ಪಂ.ಗಳಲ್ಲಿ ನಗರ ಕ್ಷೇತ್ರದಲ್ಲಿ ಭರ್ಜರಿ ಅಂತರದ ಜಯಗಳಿಸಿದ್ದು, ಇನ್ನೊಂದರಲ್ಲಿ ಕೇವಲ 108 ಮತಗಳ ಅಂತರದಲ್ಲಿ ಸೋಲು ಕಾಣುವಂತಾಗಿರುವುದು ಬೇಸರದ ಸಂಗತಿ ಎಂದು ಚುನಾವಣೆಯ ಯಶಸ್ಸು ಕುರಿತು ಮಾತನಾಡಿದರು.

ಈ ಸಾರಿಯ ಚುನಾವಣೆಯಲ್ಲಿ ಕೆಲವು ಸ್ಥಾನಗಳು ಅಲ್ಪ ಅಂತರದ ಮತದ ಕಾರಣ ಸೋಲು ಕಂಡಿದ್ದೇವೆ. ಇದು ಒಟ್ಟಾರೆ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ. ಅಭಿವೃದ್ಧಿ ಮಂತ್ರವನ್ನು ನಂಬಿದ ನಮ್ಮ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದಲ್ಲಿ ಯಶಗಳಿಸುವ ಮೂಲಕ ವಿರೋಧಿಗಳ ಟೀಕೆಗೆ ಉತ್ತರ ನೀಡಿದ್ದೇವೆ ಎಂದರು. ಮುಖಂಡರಾದ ಪದ್ಮನಾಭ ಭಟ್, ಎನ್.ಆರ್. ದೇವಾನಂದ್, ಉಮೇಶ್ ಕಂಚುಗಾರ್, ಬಿ. ಯುವರಾಜ್, ವೆಂಕಟೇಶ್ ಆಚಾರ್, ಜಯಲಕ್ಷ್ಮೀ ಆಚಾರ್, ಸುಮಾ ಸುಬ್ರಹ್ಮಣ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.