ADVERTISEMENT

ಭಾರತದ ಉನ್ನತಿ ಅಧ್ಯಾತ್ಮದಿಂದ ಸಾಧ್ಯ: ಜಗದೀಶ ಕಾರಂತ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 5:26 IST
Last Updated 6 ಜನವರಿ 2014, 5:26 IST

ಭದ್ರಾವತಿ: ‘ಭಾರತ ಅಧ್ಯಾತ್ಮ ಹಾಗೂ ಹಿಂದುತ್ವ ಪರಂಪರೆ ಮೇಲೆ ಉಳಿದಿದ್ದು, ಇದರ ಅಭಿವೃದ್ಧಿ ಈ ಚಿಂತನೆಯಿಂದಲೇ ಸಾಧ್ಯ’ ಎಂದು ಹಿಂದೂ ಜಾಗರಣಾ ವೇದಿಕೆ ರಾಜ್ಯ ಸಂಚಾಲಕ ಜಗದೀಶ ಕಾರಂತ ಹೇಳಿದರು.

ಇಲ್ಲಿನ ಜಯಶ್ರೀ ಕಲ್ಯಾಣ ಮಂಟಪದಲ್ಲಿ ಭಾನುವಾರ ಧರ್ಮಜಾಗರಣ ಅರ್ಚಕರ ಸಭಾ ಮಂಡಳಿ ಆಯೋಜಿಸಿದ್ದ ದಶಮಾನೋತ್ಸವ ಸಮಾರಂಭದಲ್ಲಿ   ಅವರು  ಮಾತನಾಡಿದರು.

ಇಡೀ ವಿಶ್ವದಲ್ಲೇ ಭಾರತ ವಿಶಿಷ್ಟ ಸ್ಥಾನಮಾನ ಹೊಂದಿದ್ದು, ಸಹಸ್ರಾರು ವರ್ಷಗಳ ಅನ್ಯರ ದಬ್ಬಾಳಿಕೆ ನಡುವೆಯೂ ಇಲ್ಲಿನ ಸಂಸ್ಕೃತಿ ನಾಶವಾಗದರ ಹಿಂದೆ ಅಧ್ಯಾತ್ಮ ಹಾಗೂ ಹಿಂದುತ್ವದ ಶಕ್ತಿ ಅಡಗಿದೆ ಎಂದು ಪ್ರತಿಪಾದಿಸಿದರು.

ಧರ್ಮ ಜಾಗರಣಾ ರಾಜ್ಯ ಸಂಚಾಲಕ ಎಂ. ಮುನಿಯಪ್ಪ ಮಾತನಾಡಿ, ‘ದೇವಾಲಯಗಳು ನಮ್ಮ ಬದುಕಿನ ನಂಬಿಕೆಯ ಕೇಂದ್ರವಾಗಿದೆ. ಇದನ್ನು ಗಮನಿಸುವ ಅರ್ಚಕರು ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದಾರೆ’ ಎಂದರು.

‘ನಮ್ಮ ದೇಶ ವ್ಯಕ್ತಿ ಚಾರಿತ್ರ್ಯದ ಮೇಲೆ ನಿಂತಿಲ್ಲ. ಬದಲಾಗಿ ರಾಷ್ಟ್ರ ಚಾರಿತ್ರ್ಯದ ಶಕ್ತಿಯ ಮೇಲೆ ನಿಂತಿದೆ. ಇದನ್ನು ಪರಿಪಾಲಿಸುವ ಸಂಸ್ಕೃತಿ ನಮ್ಮ ದೇವಾಲಯದಲ್ಲಿ ಇದೆ. ಹಾಗಾಗಿ, ಇದನ್ನು ರಕ್ಷಿಸುವ ಅರ್ಚಕರ ಜವಾಬ್ದಾರಿ  ಸಮಾಜದ ಮೇಲಿದೆ’ ಎಂದು ವಿವರಿಸಿದರು.

ಮಂಡಳಿ ಗೌರವಾಧ್ಯಕ್ಷ ಎನ್‌.ಎಸ್‌. ಕೃಷ್ಣಮೂರ್ತಿ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಬಿ.ಎಲ್‌. ನಾಗರಾಜ ಉಪಾಧ್ಯಾಯ, ಉಪಾಧ್ಯಕ್ಷ ಎಸ್‌.ವಿ. ರಾಮಾನುಜ ಅಯ್ಯಂಗಾರ್ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಜನ್ನಾಪುರ ಗಣಪತಿ ದೇವಾಲಯದಿಂದ ಅರ್ಚಕರು ಮೆರವಣಗೆ ನಡೆಸಿದರು.

ಜೆ.ಡಿ. ವಾಸುದೇವ ಭಟ್, ವಿಶ್ವೇಶ್ವರ ಉಡುಪ, ಸಂಜಯಕುಮಾರ್, ಸತೀಶ್ ಭಟ್, ರಾಘವೇಂದ್ರ ಉಪಾಧ್ಯಾಯ, ರಂಗನಾಥಶರ್ಮಾ, ಮುರಳೀಧರ ಶರ್ಮಾ, ನಾರಾಯಣಮೂರ್ತಿ, ಮಂಜುನಾಥ, ಶ್ರೀಧರ ಅಡಿಗ, ಫಾಲಚಂದ್ರಭಟ್, ಬದರಿನಾರಾಯಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.