ಶಿವಮೊಗ್ಗ: ಇಂದಿನ ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆಯಿದೆ ಎಂದು ವಿಧಾನ ಪರಿಷತ್ ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾವು ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆಯಲ್ಲಿ ಪ್ರಗತಿ ಸಾಧಿಸಿದ್ದೇವೆ ಎಂದು ಚರ್ಚಿಸುತ್ತಿದ್ದೇವೆಯೇ ವಿನಾ ಮಕ್ಕಳಿಗೆ ಏನನ್ನು ಕಲಿಸಬೇಕು, ಏನನ್ನು ಕಲಿಸಬಾರದು ಎನ್ನುವ ಕುರಿತು ಚರ್ಚಿಸುತ್ತಿಲ್ಲ. ಈ ಬಗ್ಗೆ ಹೆಚ್ಚು ಚರ್ಚೆಗಳು, ಸಂವಾದಗಳು ನಡೆಯಬೇಕಿದೆ. ಇಲ್ಲದೆ ಹೋದರೆ ಭಾರತ ಮಾತಾಕೀ ಜೈ ಎನ್ನುವ ಮಕ್ಕಳಿಗೆ ಬದಲಾಗಿ ಭಾರತವನ್ನು ತುಂಡು ತುಂಡು ಮಾಡುವ ಹೇಳಿಕೆಗೆ ಜಿಂದಾಬಾದ್ ಎನ್ನುವ ಮಕ್ಕಳು ತಯಾರಾಗಲಿದ್ದಾರೆ’ ಎಂದು ಹೇಳಿದರು.
‘ಸಹ್ಯಾದ್ರಿ ಕಾಲೇಜು ನಮ್ಮೆಲ್ಲರನ್ನು ದೊಡ್ಡವರನ್ನು ಮಾಡಿದೆ. ಇಂತಹ ಕಾಲೇಜಿನಲ್ಲಿ ಓದಿದ ನಾವೆಲ್ಲರು ಸೇರಲು ರೂಪಿಸಿರುವ ಈ ಕಾರ್ಯಕ್ರಮ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಮನಸ್ಸಿಗೆ ಸಂತೋಷ ನೀಡುವುದರ ಜತೆಗೆ ಇಂತಹ ಕಾರ್ಯಕ್ರಮಗಳಿಂದ ಸದೃಢ ಸಮಾಜ ರೂಪಿಸುವ ಅನೇಕ ಮಹತ್ವದ ನಿರ್ಣಯಗಳು ಕೈಗೊಳ್ಳಬೇಕಿದೆ. ಅಲ್ಲದೆ ಸಹ್ಯಾದ್ರಿ ಕಾಲೇಜಿನ ಅಮೃತ ಭವನವನ್ನು ಎಲ್ಲರು ಸೇರಿ ಕಟ್ಟಬೇಕಿದೆ ಎಂದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಕಾಲೇಜು ದಿನಗಳನ್ನು ಮೆಲುಕು ಹಾಕಿ ಖುಷಿ ಪಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಬಿ.ಕೆ.ಸುಮಿತ್ರಾ, ಆಯನೂರು ಮಂಜುನಾಥ್, ಕೆ.ಟಿ.ಗಂಗಾಧರ್, ಡಾ.ಶ್ರೀಕಂಠ ಕೂಡಿಗೆ, ಡಾ.ಸಣ್ಣರಾಮ, ಡಾ.ಭೋಜ್ಯಾನಾಯ್ಕ್, ಎ.ಆರ್.ರವಿ, ಕೆ.ಬಿ.ಪ್ರಸನ್ನಕುಮಾರ್, ಎಂ.ಗುರುಮೂರ್ತಿ, ಜೋಗನ್ ಶಂಕರ್, ಷಡಾಕ್ಷರಿ, ಸತ್ಯನಾರಾಯಣ, ಎನ್.ಮಂಜುನಾಥ್, ಏಳುಮಲೈ, ಜೇಸುದಾಸ್, ರಂಗನಾಥ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.