ADVERTISEMENT

ಮೇಲಿನಕುರುವಳ್ಳಿಯಲ್ಲಿ ಡಿ.12, 13ರಂದು ಕನ್ನಡ ಹಬ್ಬ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 9:18 IST
Last Updated 7 ಡಿಸೆಂಬರ್ 2017, 9:18 IST

ತೀರ್ಥಹಳ್ಳಿ: ಕನ್ನಡ ಹಬ್ಬ, ಕ್ರೀಡೆ, ರಸಪ್ರಶ್ನೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಿಸೆಂಬರ್‌ 12 ಮತ್ತು 13ರಂದು ಮೇಲಿನಕುರುವಳ್ಳಿಯ ಕಡಿದಾಳು ಮಂಜಪ್ಪ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಎಸ್‌.ಮಂಜುನಾಥ್‌ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಂಸ್ಕೃತಿಕ ಜೀವನ ಭಾಷೆಯಾಗಿರುವ ಕನ್ನಡ ಹಬ್ಬದ ಆಚರಣೆ ನವೆಂಬರ್‌ ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು. ಅದರ ಆಚರಣೆ ಸಾರ್ವಕಾಲಿಕವಾಗಿದೆ’ ಎಂದರು.

ಕಾರ್ಯಕ್ರಮವನ್ನು ಮೇಲಿನಕುರುವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಿ.ರವಿ ಬೆಳಿಗ್ಗೆ 8–10ಕ್ಕೆ ಉದ್ಘಾಟಿಸುವರು. ಮೇಲಿನಕುರುವಳ್ಳಿ ಕಡಿದಾಳ್‌ ಮಂಜಪ್ಪ ವೃತ್ತದಿಂದ ಪಟ್ಟಣದ ಕೊಪ್ಪ ವೃತ್ತದವರೆಗೆ 100 ಮೀಟರ್‌ ಕನ್ನಡ ಬಾವುಟದೊಂದಿಗೆ ಬೃಹತ್‌ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. 9–30ಕ್ಕೆ ಪುರುಷ ಮತ್ತು ಮಹಿಳೆಯರಿಗೆ ಗ್ರಾಮೀಣ ಕ್ರೀಡಾಕೂಟ, ಶಾಲಾ ಮಕ್ಕಳಿಗೆ ರಸಪ್ರಶ್ನೆ ಹಮ್ಮಿಕೊಳ್ಳಲಾಗಿದೆ ಎಂದು ಮಂಜುನಾಥ್‌ ಹೇಳಿದರು.

ADVERTISEMENT

ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಸಭಾಧ್ಯಕ್ಷ ಕುರುವಳ್ಳಿ ಪೂರ್ಣೇಶ್‌ ಪೂಜಾರಿ ಮಾತನಾಡಿ, ‘ಅನೇಕ ವರ್ಷಗಳಿಂದ ರಾಜ್ಯೋತ್ಸವ ಸಮಿತಿ ನೇತೃತ್ವದಲ್ಲಿ ಕನ್ನಡ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕನ್ನಡದ ವಿಸ್ತಾರತೆಯನ್ನು ವಿಶೇಷವಾದ ಕಾರ್ಯಕ್ರಮದ ಮೂಲಕ ಹಮ್ಮಿಕೊಳ್ಳಲಾಗಿದೆ. ಕನ್ನಡ ನಶಿಸಿಹೋಗುತ್ತಿದೆ ಎಂಬ ಭಾವನೆ ದೂರವಾಗಬೇಕಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಉಮೇಶ್‌, ಕಾರ್ಯದರ್ಶಿ ದೇವರಾಜ್‌, ಪ್ರಚಾರ ಸಮಿತಿಯ ಮಂಜುನಾಥ್‌, ಪ್ರಮುಖರಾದ ಪ್ರಮೋದ್‌ ಪೂಜಾರಿ, ಬೆಟ್ಟಮಕ್ಕಿ ನವೀನ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.