ADVERTISEMENT

ಯಡಿಯೂರಪ್ಪ ನೋವು ಅರ್ಥ ಮಾಡಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 4:50 IST
Last Updated 3 ಅಕ್ಟೋಬರ್ 2012, 4:50 IST

ಶಿವಮೊಗ್ಗ: ಯಡಿಯೂರಪ್ಪ ಪ್ರಶ್ನಾತೀತ, ಜಾತ್ಯತೀತ ನಾಯಕ. ಅವರ ಮೇಲಿನ ಸುಳ್ಳನ್ನು  ಪದೇ, ಪದೇ ಅಪಪ್ರಚಾರ ಮಾಡಿ, ಅವರನ್ನು ಬಲಿಪಶು ಮಾಡುವುದು ಸರಿಯಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಡಿಯೂರಪ್ಪ ಅವರಿಗೆ ನೋವು ಇದೆ. ನೋವಿನ ಹಿಂದೆ ಇತಿಹಾಸವಿದೆ. ಇದನ್ನು ಪಕ್ಷದ ನಾಯಕರು, ವರಿಷ್ಠರು ಅರ್ಥ ಮಾಡಿಕೊಳ್ಳಬೇಕು ಎಂದರು.

ಯಡಿಯೂರಪ್ಪ ಹೊಸ ಪಕ್ಷ ಕಟ್ಟುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,   ಯಡಿಯೂರಪ್ಪ ಸದ್ಯ ಬಿಜೆಪಿಯಲ್ಲಿದ್ದಾರೆ. ನಾವೂ ಬಿಜೆಪಿಯಲ್ಲಿದ್ದೇವೆ. ಹೊರಗೆ ಹೋಗುವ ಕಾಲ ಬರುವುದು ಬೇಡ. ನಾನು, ಯಡಿಯೂರಪ್ಪ ಅವರಿಗಾಗಿ ಬಿಜೆಪಿಗೆ ಬಂದಿಲ್ಲ. ಅನಂತಕುಮಾರ್, ಈಶ್ವರಪ್ಪ ಅವರೇ ತಮ್ಮನ್ನು ಬಿಜೆಪಿಗೆ ಕರೆದು ತಂದಿದ್ದು ಎಂದು ಮಾರ್ಮಿಕವಾಗಿ ನುಡಿದರು.

ಲ್ಯಾಂಡ್‌ಬ್ಯಾಂಕ್ ಉದ್ದೇಶ

ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸುಮಾರು 500 ಎಕರೆ ಜಮೀನನ್ನು ಮಾರುಕಟ್ಟೆಯ ದರದಲ್ಲಿ ತೆಗೆದುಕೊಂಡು ಲ್ಯಾಂಡ್‌ಬ್ಯಾಂಕ್ ಸ್ಥಾಪಿಸುವ ಮಾಡುವ ಉದ್ದೇಶವನ್ನು ಇಲಾಖೆ ಹೊಂದಿದೆ ಎಂದರು.

ಇದರಿಂದ ಬೆಂಗಳೂರಿಗೆ ವಲಸೆ ತಡೆಯಲು ಸಾಧ್ಯವಾಗಲಿದೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಲ್ಯಾಂಡ್‌ಬ್ಯಾಂಕ್ ಸ್ಥಾಪಿಸದಿದ್ದರೆ ಯಾರಿಗೂ ನಿವೇಶನ ನೀಡಲು ಸಾಧ್ಯವಾಗುವುದಿಲ್ಲ ಎಂದರು.

ಇಚ್ಛಾಶಕ್ತಿ, ದೊಡ್ಡತನ ಹಾಗೂ ಅನುಭವ ಇದ್ದರೆ ಎಂತಹ ಕೆಲಸವನ್ನೂ ಮಾಡಬಹುದು ಎಂದ ಅವರು, ರಾಜೀವ್‌ಗಾಂಧಿ ಅವಾಸ್ ಯೋಜನೆ ಪ್ರಕಾರ 1ಲಕ್ಷ ಮನೆಗಳನ್ನು ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಅದರಂತೆ ಶೀಘ್ರದಲ್ಲಿ 50 ಸಾವಿರ ಮನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಘದ ಅಧ್ಯಕ್ಷ ಶೃಂಗೇಶ್, ಉಪಾಧ್ಯಕ್ಷ ಜೇಸುದಾಸ್, ಪ್ರಧಾನ ಕಾರ್ಯದರ್ಶಿ ವೈ.ಕೆ. ಸೂರ್ಯನಾರಾಯಣ್, ಟ್ರಸ್ಟ್ ಅಧ್ಯಕ್ಷ ಮಂಜುನಾಥ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.