ADVERTISEMENT

ರಾಜಕೀಯ ಶುದ್ಧೀಕರಣಕ್ಕೆ ಆಮ್‌ ಆದ್ಮಿ ಪಕ್ಷ ಪಣ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:21 IST
Last Updated 18 ಜೂನ್ 2018, 13:21 IST

ತೀರ್ಥಹಳ್ಳಿ: ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಶ್ರೀಧರ್‌ ಕಲ್ಲಹಳ್ಳ, ಕಡಿದಾಳ್‌ ಶಾಮಣ್ಣ ನೇತೃತ್ವದಲ್ಲಿ ಗುರುವಾರ ಪಟ್ಟಣದ ಕುಶಾವತಿ ನೆಹರೂ ಪಾರ್ಕ್‌ನಿಂದ ಪ್ರಮುಖ ಬೀದಿಗಳಲ್ಲಿ ಸಾಮಾನ್ಯ ಪಾದಯಾತ್ರೆ ನಡೆಸಿ ಮತ ಯಾಚಿಸಿದರು.

ಪಟ್ಟಣದ ಆಜಾದ್‌ ರಸ್ತೆ ಮೂಲಕ ಸಾಗಿದ ಪಾದಯಾತ್ರೆಯಲ್ಲಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು, ರೈತಸಂಘದ ಕಾರ್ಯಕರ್ತರು,  ಪ್ರಗತಿಪರ ಸಂಘಟನೆಯ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕುಶಾವತಿಯಿಂದ ಹೊರಟ ಪಾದಯಾತ್ರೆ ಸೀಬಿನಕೆರೆ ತಲುಪಿ ಶಾಂತವೇರಿ ಗೋಪಾಲಗೌಡ ವೃತ್ತದ ಮೂಲಕ ಆಗುಂಬೆ ಮುಖ್ಯ ಬಸ್‌ ನಿಲ್ದಾಣ, ಸೊಪ್ಪಗುಡ್ಡೆಯ ಅಂಬೇಡ್ಕರ್‌ ವೃತ್ತ ಹಾಗೂ ಕುವೆಂಪು ವೃತ್ತದಲ್ಲಿ  ಮೂಲಕ ಹಾದು ಹೋಯಿತು.

ಆಗುಂಬೆ ಮುಖ್ಯ ಬಸ್‌ನಿಲ್ದಾಣದ ಬಳಿ ನಡೆದ ಸಭೆಯಲ್ಲಿ ಮಾತನಾಡಿದ ಶ್ರೀಧರ್‌ ಕಲ್ಲಹಳ್ಳ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಆಮ್‌ ಆದ್ಮಿ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ರಾಜಕೀಯ ಶುದ್ದೀಕರಣಕ್ಕೆ ಆಮ್‌ ಆದ್ಮಿ ಪಾರ್ಟಿ ಪ್ರಯತ್ನ ನಡೆಸುತ್ತಿದೆ. ಜನರನ್ನು ಗೌರವಿಸುವ ಜನರ ಅಭಿಲಾಷೆಗೆ ತಕ್ಕಂತೆ ದೇಶವನ್ನು ಮುನ್ನಡೆಸುವ ಅಗತ್ಯವಿದ್ದು. ಅಂಥ ಕೆಲಸವನ್ನು ಆಮ್‌ ಆದ್ಮಿ ಪಕ್ಷ ಮಾಡಲಿದೆ ಎಂದರು.

ರೈತ ಮುಖಂಡ ಕಡಿದಾಳು ಶಾಮಣ್ಣ ಅವರು ಮಾತನಾಡಿ, ರಾಜಕಾರಣದ ದಿಕ್ಕು ಬದಲಾಗ ಬೇಕಾಗಿದೆ. ಅದಕ್ಕೆ ಸರಿಯಾದ ಸಮಯ ಬಂದಿದೆ. ಈಗ ಜನತೆ ಜಾಗೃತಿ ವಹಿಸದಿದ್ದರೆ ದೇಶ ಇನಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಪ್ರಜ್ಞಾವಂತರು ಇದನ್ನು ಮನಗಂಡು ಮತದಾನ ಮಾಡಬೇಕಿದೆ ಎಂದರು.

ಪಕ್ಷದ ತಾಲ್ಲೂಕು ಸಹ ಸಂಚಾಲಕ ನೆಂಪೆ ದೇವರಾಜ್ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್‌ ಸಂಪೂರ್ಣ ನಿಷ್ಕ್ರಿಯವಾಗಿದೆ. ಆಮ್‌ ಆದ್ಮಿ ಪಕ್ಷ ಈಗ ಸಂಚಲನ ಮೂಡಿಸುತ್ತಿದೆ ಎಂದರು.

ಸಭೆಯಲ್ಲಿ ರೈತ ಮುಖಂಡ ಎಸ್‌.ಟಿ.ದೇವರಾಜ್‌, ಆಮ್‌ ಆದ್ಮಿ ಪಕ್ಷದ ಗೌರವ ಅಧ್ಯಕ್ಷ ಖಾಸಿಂ ಸಾಬ್‌, ಕಾರ್ಯದರ್ಶಿ ನಿಶ್ಚಲ್‌ ಜಾದೂಗಾರ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.