ರಿಪ್ಪನ್ಪೇಟೆ: ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ಸಿಗದೇ ಇರುವುದನ್ನು ಖಂಡಿಸಿ ಅವರ ಅಭಿಮಾನಿ ಬಳಗ ಬುಧವಾರ ಕರೆ ನೀಡಿದ್ದ ರಿಪ್ಪನ್ಪೇಟೆ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಕಾಂಗ್ರೆಸ್ ಕರೆಗೆ ಓಗೊಟ್ಟು ಬೆರಳೆಣಿಕೆಯ ಅಂಗಡಿಗಳು ಮುಂಗಟ್ಟುಗಳು ತೆರೆಯುವ ಮೂಲಕ ಬಂದ್ಗೆ ಸಹಮತ ವ್ಯಕ್ತಪಡಿಸಿಲ್ಲ. ಬೆಳಿಗ್ಗೆ 6ರಿಂದ 2ರವರೆಗೆ ಬಂದ್ ಪೂರ್ಣಗೊಂಡಿತ್ತು. ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳು ಬ್ಯಾಂಕ್ ಅಂಚೆ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದವು. ವಾಹನ ಸಂಚಾರಕ್ಕೂ ಯಾವುದೇ ಅಡೆತಡೆಗಳಿರಲಿಲ್ಲ.
ಮಧ್ಯಾಹ್ನ ವಿನಾಯಕ ವೃತ್ತದಲ್ಲಿ ಸಭೆ ಸೇರಿದ ಅಭಿಮಾನಿ ಬಳಗದ ಮುಖಂಡರು ಬಿಜೆಪಿ ಸರ್ಕಾರದಲ್ಲಿ ಬೇಳೂರರಿಗೆ ಮಂತ್ರಿ ಸ್ಥಾನ ಸಿಕ್ಕದಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಬೇಳೂರು ಅವರ ಅಭಿಮಾನಿ ಬಳಗದ ಮುಖಂಡರಾದ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರವೀಂದ್ರ ಕೆರೆಹಳ್ಳಿ, ಆರ್.ಎಚ್. ಶ್ರೀನಿವಾಸ, ಎಂ.ಬಿ. ಮಂಜುನಾಥ, ಆರ್. ರಾಘವೇಂದ್ರ, ತಿಮ್ಮಪ್ಪ ಬೆಳ್ಳೂರು, ದೇವರಾಜ್ ಪವಾರ್,ಜಿ.ಆರ್. ಗೋಪಾಲಕೃಷ್ಣ, ಕುಷನ್ ದೇವರಾಜ್, ಚಂದ್ರಕುಮಾರ್ ಮತ್ತು ಸಂತೋಷ ಹಾಜರಿದ್ದರು.
ಬಂದ್ ಹಿನ್ನಲೆಯಲ್ಲಿ ಹೊಸನಗರ ಸಿಪಿಐ ಗಣಪತಿ ಗುಡಾಜೆ ಹಾಗೂ ಪಿಎಸ್ಐ ಫಿರೋಜ್ ಮಹಮದ್ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಬಂದ್ಗೆ ಸಹಕರಿಸಿದ ವರ್ತಕರಿಗೆ ಮತ್ತು ನಾಗರಿಕರಿಗೆ ಗ್ರಾ.ಪಂ. ಉಪಾಧ್ಯಕ್ಷ ರವೀಂದ್ರ ಕೆರೆಹಳ್ಳಿ ಹಾಗೂ ಆರ್.ಎಚ್. ಶ್ರೀನಿವಾಸ ಅಭಿನಂದನೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.