ಶಿವಮೊಗ್ಗ: ನಗರದ ಶಂಕರಮಠ ರಸ್ತೆಯ ವಿಸ್ತರಣೆ ಕಾರ್ಯಾಚರಣೆ ಪೊಲೀಸ್ ಭದ್ರತೆಯಲ್ಲಿ ಲೋಕೋಪಯೋಗಿ ಇಲಾಖೆ ನೇತೃತ್ವದಲ್ಲಿ ಬುಧವಾರದಿಂದ ಆರಂಭಗೊಂಡಿದೆ.
ತೆರವಾಗುವ ಕಟ್ಟಡಗಳಿಗೆ ಕಳೆದ ಹಲವು ದಿನಗಳ ಹಿಂದೆಯೇ ಮಾರ್ಕಿಂಗ್ ಮಾಡಲಾಗಿತ್ತು. ಕಟ್ಟಡ ತೆರವಿಗೆ ವರ್ತಕರು-ಮಾಲೀಕರಿಗೆ ಸೂಚನೆಯನ್ನು ಲೋಕೋಪಯೋಗಿ ಇಲಾಖೆ ನೀಡಿತ್ತು. ಆದರೂ ಕೆಲವರು ಕಟ್ಟಡ ತೆರವುಗೊಳಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಪೊಲೀಸ್ ಭದ್ರತೆಯಲ್ಲಿ ಲೋಕೋಪಯೋಗಿ ಇಲಾಖೆ ಸಿಬ್ಬಂದಿ, ಫೋಕ್ಲೈನ್ ಮೂಲಕ ಕಟ್ಟಡಗಳ ತೆರವು ಕಾರ್ಯ ಆರಂಭಿಸಿದರು.
ಕಾರ್ಯಾಚರಣೆ ಆರಂಭ ಆಗುತ್ತಿದ್ದಂತೆ ಕೆಲ ಕಟ್ಟಡ ಮಾಲೀಕರು, ವರ್ತಕರು ಸ್ವಯಂಪ್ರೇರಿತವಾಗಿ ತಮ್ಮ ಕಟ್ಟಡ ತೆರವುಗೊಳಿಸಲು ಮುಂದಾದರು. ಸ್ಥಳಕ್ಕೆ ಇಲಾಖೆ ಅಧಿಕಾರಿಗಳಾದ ನಂಜೇಶಯ್ಯ, ರಘುರಾಂಶೆಟ್ಟಿ, ಮಂಜುನಾಥ್, ನಗರಸಭೆ ಆಯುಕ್ತ ರಮೇಶ್ ಭೇಟಿ ನೀಡಿ, ಪರಿಶೀಲಿಸಿದರು.
ಈ ರಸ್ತೆಯನ್ನು ಒಟ್ಟು 75 ಅಡಿ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಒಟ್ಟಾರೆ ಈ ರಸ್ತೆಯಲ್ಲಿ ಸುಮಾರು 43 ಕಟ್ಟಡಗಳನ್ನು ತೆರವು ಮಾಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.