ADVERTISEMENT

ಶಾಪವಾದ ಜಲವಿದ್ಯುತ್ ಯೋಜನೆ

ಮುಳುಗಡೆ ಹಿನ್ನೀರಿನಿಂದ ಸಂಪರ್ಕ ಕಡಿದುಕೊಂಡವರ ನೋವಿನ ಕಥೆ...

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 10:02 IST
Last Updated 21 ಡಿಸೆಂಬರ್ 2012, 10:02 IST

ತೀರ್ಥಹಳ್ಳಿ: ಎತ್ತ ನೋಡಿದರೂ ತಣ್ಣನೆ ತೊನೆದಾಡುವ ಹಿನ್ನೀರು. ಅಲ್ಲಲ್ಲಿ ಕಾಣುವ ನಡುಗಡ್ಡೆಗಳು, ಸಂಚಾರಕ್ಕೆ ಯೋಗ್ಯವಲ್ಲದ ಮಣ್ಣಿನ ರಸ್ತೆಗಳು, ಮೋರಿ, ಸೇತುವೆ ಇಲ್ಲದ ಈ ಊರಿನಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಅನಿವಾರ್ಯತೆಯಲ್ಲಿ ಕಾಲ ನೂಕುವ ಜನರಿಗೆ ಜಲವಿದ್ಯುತ್ ಯೋಜನೆಗಳೇ ಶಾಪವಾಗಿವೆ.

 ನಗರ ಹೋಬಳಿ ಯಡೂರು ಸಮೀಪದ ಬಿಚ್ಚಾಡಿ, ಮಾನಿಜೆಡ್ಡು, ಮಾಗಲು ಗ್ರಾಮದ ಜನರು ವಾರಾಹಿ ಯೋಜನೆಯ ಮುಳುಗಡೆಯಿಂದಾಗಿ ರಸ್ತೆ ಸಂಪರ್ಕ ಕಳೆದುಕೊಂಡಿದ್ದಾರೆ. ಈ ಭಾಗದ ಜನರು ಬದಲಿ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮಾಡಿಕೊಂಡಿರುವ ಮನವಿಗೆ ಕಿಮ್ಮತ್ತು ಸಿಕ್ಕಿಲ್ಲ.

ಇಲ್ಲಿ ಬಹುತೇಕ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಹಿಂದುಳಿದ ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರಾಗ್ದ್ದಿದು ಶಿಕ್ಷಣ, ಸಾರಿಗೆ ಸಂಪರ್ಕದಿಂದ  ದೂರ ಉಳಿಯುವಂತಾಗಿದೆ. ವಾರಾಹಿ ಜಲವಿದ್ಯುತ್ ಯೋಜನೆಯಿಂದಾಗಿ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿರುವ ಇಲ್ಲಿನ ಜನರಿಗೆ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ.

ಅಧಿಕಾರಿಗಳು ಇತ್ತ ಮುಖ ಮಾಡಿಲ್ಲ. ಜನಪ್ರತಿನಿಧಿಗಳು ನಮ್ಮನ್ನು ಏನೆಂದು ಕೇಳುತ್ತಿಲ್ಲ ಎಂದು ಬಿಚ್ಚಾಡಿ ಪದ್ಮಪ್ಪ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಈ ಗ್ರಾಮಗಳಿಂದ ಹೊರಗಿನ ಸಂಪರ್ಕ ಪಡೆಯಲು ತೀರ್ಥಹಳ್ಳಿ-ಯಡೂರು ರಾಜ್ಯ ಹೆದ್ದಾರಿಯಲ್ಲಿ ಮೇಕೇರಿಯಿಂದ ಕೊಳವಾಡಿ, ಬಿಚ್ಚಾಡಿ, ಮಾನಿಜೆಡ್ಡು ಹಾಗೂ ಮಾಗಲು ಊರಿಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಇದ್ದು. ಈ ರಸ್ತೆ ವರಾಹಿ ಹಿನ್ನೀರಿನಿಂದ ನೀರಲ್ಲಿ ಮುಳುಗಿದೆ.

ADVERTISEMENT

ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ದ್ವೀಪದಂತಾಗಿದೆ.  ಊರಿನಲ್ಲಿ ಏನಾದರೂ ಅವಘಡ ಸಂಭವಿಸಿದರೆ, ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಲು ಅವಕಾಶವಿಲ್ಲದಂತಾಗಿದೆ. ರೋಗಿಗಳು, ವಯೋವೃದ್ಧರು, ಗರ್ಭಿಣಿಯರ ಗೋಳನ್ನು ಕೇಳುವವರೆ ಇಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕೂಲಿಯನ್ನೇ ನಂಬಿರುವ ಇಲ್ಲಿನ ಜನರು ಹೊರಗಿನ ಗ್ರಾಮಗಳಿಗೆ ಕೂಲಿ ಕೆಲಸಕ್ಕೂ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಹಳ್ಳಿಗಳನ್ನು ತಮ್ಮ ಪರಿಧಿಯಿಂದ ಕೈಬಿಟ್ಟಿದೆಯೇ ಎನ್ನುವ ಅನುಮಾನ ಗ್ರಾಮಸ್ಥರ್ದ್ದದು.

ಚುನಾವಣೆಗಳು ಬಂದಾಗ ಎಡತಾಕುವ ರಾಜಕಾರಣಿಗಳು ನಂತರ ಕಣ್ಮರೆಯಾಗುತ್ತಾರೆ. ಕೇವಲ ಓಟಿಗಾಗಿ ಇಲ್ಲ ಸಲ್ಲದ ಭರವಸೆಗಳನ್ನು ನೀಡುತ್ತಾರೆ. ಕಡು ಬಡತನದ ಜೀವನ ಸಾಗಿಸುವ ನಾವು ಏನು ಮಾಡಬೇಕು ಎಂಬುದೇ ಈಗ ಉಳಿದಿರುವ ಪ್ರಶ್ನೆಯಾಗಿದೆ ಎಂದು ಸ್ಥಳೀಯರು ಕಂಡ ಕಂಡವರಲ್ಲಿ ಅಲವತ್ತುಕೊಳ್ಳು ವಂತಾಗಿದ್ದು ಸಮಸ್ಯೆಯ ಗಂಭೀರತೆಯನ್ನು ಹೇಳುತ್ತದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಮತದಾನವನ್ನು ಬಹಿಷ್ಕರಿಸಿದ್ದೆವು. ಆಗ ಎಚ್ಚೆತ್ತುಕೊಂಡ ಅಧಿಕಾರಿಗಳು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಅವೆಲ್ಲವೂ ಈಗ ಕೇವಲ ಭರವಸೆಗಳಾಗಿ ಉಳಿದಿವೆ ಎನ್ನುತ್ತಾರೆ ಇಲ್ಲಿನ ಜನತೆ.

ಆಗಾಗ್ಗೆ ಈ ಹಳ್ಳಿಗಳಿಗೆ ಭೇಟಿ ನೀಡುವ ನಕ್ಸಲರ ತಂಡ ಇಲ್ಲಿ ಗುಪ್ತವಾಗಿ ಸಭೆ ನಡೆಸುತ್ತಾರೆ. ಸಮಸ್ಯೆಗಳ ಪರಿಹಾರಕ್ಕೆ ನಾವು ಸಿದ್ದರಿದ್ದೇವೆ ನಮ್ಮ ಜೊತೆ ಹೋರಾಟಕ್ಕೆ ಕೈಜೋಡಿಸಿ ಎಂದು ವಿನಂತಿಸಿಕೊಳ್ಳತ್ತಾರೆ. ನಾವು ಯಾರನ್ನು ನಂಬ ಬೇಕು ಎಂಬುದೇ ತಿಳಿಯುತ್ತಿಲ್ಲ ಎಂಬ ಗೊಂದಲ ಈ ಹಳ್ಳಿಗರದ್ದು.

ನಕ್ಸಲರು ಭೇಟಿ ನೀಡಿದ ಮಾಹಿತಿ ಆಧರಿಸಿ ಪೋಲೀಸರು ಬರುತ್ತಾರೆ. ಅವರು ನಕ್ಸಲರು ಬಂದಿದ್ದರೇ ಎಂದು ವಿಚಾರಿಸುತ್ತಾರೆ. ಆದರೆ, ನಮ್ಮ ಸಮಸ್ಯೆ ಅವರೂ ಕೇಳುತ್ತಿಲ್ಲ. ಇಂಥಹ ಸನ್ನಿವೇಶದಲ್ಲಿ ನಾವು ಬದುಕು ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಪರಿಹಾರ ಇಲ್ಲವೇ ಎಂಬ ಪ್ರಶ್ನೆ ಇಲ್ಲಿನ ಗ್ರಾಮಸ್ಥರದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.