ADVERTISEMENT

`ಸಕಲರಿಗೆ ಒಳಿತನ್ನು ಬಯಸುವುದೇ ಧರ್ಮ'

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 5:54 IST
Last Updated 3 ಸೆಪ್ಟೆಂಬರ್ 2013, 5:54 IST

ಸಾಗರ: ಪ್ರಪಂಚದ ಸಕಲರಿಗೆ ಒಳಿತನ್ನು ಬಯಸುವುದೇ ವೀರಶೈವ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳ ಸಾರವಾಗಿದೆ ಎಂದು ಕೋಣಂದೂರು ಬೃಹ್ಮನಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕು ವೀರಶೈವ ಯುವ ವೇದಿಕೆ ಸೋಮವಾರ ಏರ್ಪಡಿಸಿದ್ದ ಸಾಮೂಹಿಕ ರುದ್ರಾಭಿಷೇಕ ಹಾಗೂ ಧರ್ಮಸಭೆ  ಉದ್ಘಾಟಿಸಿ ಮಾತನಾಡಿದ ಅವರು,  ಧರ್ಮ ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆದರೆ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಧರ್ಮಗಳಿಂದ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ನೆಲೆಸಬೇಕು. ಅಶಾಂತಿ ಮೂಡಬಾರದು. ಧರ್ಮಗಳ ನಡುವೆ ಮೇಲು ಕೀಳು ಎಂಬ ಕಿತ್ತಾಟ ಸರಿಯಲ್ಲ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಬೆಂಗಳೂರು ಸಿದ್ದದಾತ್ರಿ ಪತ್ರಿವನ ಆಧ್ಯಾತ್ಮ ಕೇಂದ್ರದ ಅಭಿನವ ಸ್ವಾಮೀಜಿ ಮಾತನಾಡಿ ಮಾನವೀಯ ಮೌಲ್ಯಗಳನ್ನು ಪ್ರತಿಷ್ಟಾಪಿಸುವ ಜೊತೆಗೆ ಮನುಷ್ಯನನ್ನು ಅಧ್ಯಾತ್ಮದತ್ತ ಕೊಂಡೊಯ್ಯುವ ವಿಶೇಷ ಶಕ್ತಿ ಧರ್ಮಗಳಲ್ಲಿ ಇದೆ  ಎಂದರು.

ಧಾರ್ಮಿಕ ಮನೋಭಾವದಿಂದ ದೂರಾದರೆ ಬದುಕಿನಲ್ಲಿ ನೆಮ್ಮದಿಯೂ ದೂರಾದಂತೆ. ಯುವಜನರು ಧಾರ್ಮಿಕ ಆಚರಣೆಗಳ ಮಹತ್ವವನ್ನು ಅರಿಯಬೇಕು. ಧಾರ್ಮಿಕನಾಗುವುದು ಎಂದಾಕ್ಷಣ ವೈಜ್ಞಾನಿಕ ಮನೋಭಾವ ಇಲ್ಲದ ವ್ಯಕ್ತಿ ಎನ್ನುವ ಮನೋಭಾವ ಸರಿಯಲ್ಲ ಎಂದು ಹೇಳಿದರು.

ತಾಲ್ಲೂಕು ವೀರಶೈವ ಯುವ ವೇದಿಕೆಯ ಅಧ್ಯಕ್ಷ ರಾಜೇಂದ್ರ ಆವಿನಹಳ್ಳಿ  ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಲ್ಲವ ಸಂಘದ ಅಧ್ಯಕ್ಷ ಜಗದೀಶ್ ಒಡೆಯರ್, ವೀರಶೈವ ವಧು ವರರ ಅನ್ವೇಷಣಾ ಕೇಂದ್ರದ ಅಧ್ಯಕ್ಷ ವೀರಭದ್ರಪ್ಪಗೌಡ ಹಿರಳೆ, ಉಪಾಧ್ಯಕ್ಷ ಜಯಶೀಲಗೌಡ, ಜಂಗಮ ಸಮಾಜದ ಅಧ್ಯಕ್ಷ ಜಿ.ಎಸ್.ಹಿರೇಮಠ, ಅಕ್ಕನ ಬಳಗದ ರೇಖಾ ಕೆಂಬಾವಿ, ಕಿರಣ್‌ಕುಮಾರ್ ಸಿಂಪಿಗೆರೆ ಹಾಜರಿದ್ದರು.

ಉಮಾ ಮಹೇಶ್ ಪ್ರಾರ್ಥಿಸಿದರು. ಸಂಧ್ಯಾ ಬಸವನಗೌಡ ಸ್ವಾಗತಿಸಿದರು. ದಿನೇಶ್ ಬರದವಳ್ಳಿ ಪ್ರಾಸ್ತಾವಿಕ ಮಾತನಾಡಿದರು. ವಸಂತ್‌ಕುಮಾರ್ ಇ.ಬಿ. ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.