ಸಾಗರ: ನಮ್ಮ ಮೂಲಭೂತ ಕರ್ತವ್ಯಗಳ ಕಡೆ ಗಮನ ಹರಿಸದೆ ಹಕ್ಕುಗಳ ಚಲಾವಣೆ ಬಗ್ಗೆ ಮಾತ್ರ ಚಿಂತಿಸುತ್ತಿರುವುದು ಮಹಿಳೆಯರ ಮೇಲಿನ ವಿವಿಧ ರೀತಿಯ ಶೋಷಣೆಗಳಿಗೆ ಕಾರಣವಾಗಿದೆ ಎಂದು ಶೀಘ್ರ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಆರ್. ಪಾಟೀಲ್ ಹೇಳಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಗುರುವಾರ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಮೌಲ್ಯಗಳನ್ನು ನಿಷ್ಕಾಳಜಿಯಿಂದ ನೋಡುತ್ತಿರುವುದೆ ಪುರುಷ ಮತ್ತು ಸ್ತ್ರೀ ಎಂಬ ಅಸಮಾನತೆಗೆ ದಾರಿ ಮಾಡಿಕೊಡುತ್ತದೆ. ಸುಸಂಸ್ಕೃತ ಹಾಗೂ ವಿದ್ಯಾವಂತ ವರ್ಗದವರೆ ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸದೆ ಇದ್ದರೆ ಉಳಿದವರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ಶೀಘ್ರ ವಿಲೇವಾರಿ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ಯಾಮಲಾ ಶಾಸ್ತ್ರಿ ಮಾತನಾಡಿ, ಕುಟುಂಬದ ನಿರ್ವಹಣೆಯ ಜತೆಗೆ, ತನ್ನ ವ್ಯಕ್ತಿತ್ವವನ್ನು ವೃದ್ಧಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬ ಮನೋಧರ್ಮವನ್ನು ಸ್ತ್ರೀಯರು ಬೆಳೆಸಿಕೊಳ್ಳಬೇಕು. ಹೆಣ್ಣು ಮಕ್ಕಳನ್ನು ಅವರ ವ್ಯಕ್ತಿತ್ವದ ಬಗ್ಗೆ ನಂಬಿಕೆ ಹಾಗೂ ಗೌರವ ಬರುವ ರೀತಿಯಲ್ಲಿ ಬೆಳೆಸಬೇಕು ಎಂದರು.
ಎಲ್ಲಾ ಕೆಲಸಗಳಿಗೂ ಇನ್ನೊಬ್ಬರ ನೆರವು ಬೇಕು ಎನ್ನದೆ ಸ್ವತಂತ್ರ ಮನೋಭಾವ ಇದ್ದಲ್ಲಿ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಯಾರೋ ಬಂದು ತಮ್ಮನ್ನು ಉದ್ಧಾರ ಮಾಡುತ್ತಾರೆ ಎನ್ನದೆ ನಮ್ಮ ಬೆಳವಣಿಗೆಯನ್ನು ನಾವೇ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಂಗಲಾ ರಾಮಕೃಷ್ಣ ಮಾತನಾಡಿ, ಭಾರತೀಯ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆಗೆ ಅರ್ಥಪೂರ್ಣ ಚೌಕಟ್ಟು ದೊರಕಿರುವುದಕ್ಕೆ ಮಹಿಳೆಯರೆ ಕಾರಣ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರ ಜೊತೆಗೆ ಮನೆಯಲ್ಲೇ ಕೆಲಸ ಮಾಡಿ ಕುಟುಂಬವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮಹಿಳೆಯರನ್ನೂ ಯಶಸ್ವಿ ಮಹಿಳೆಯರ ಪಟ್ಟಿಗೆ ಸೇರಿಸಬೇಕು ಎಂದು ಅಭಿಪ್ರಾಯಪಟ್ಟರು.
ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಶುಕ್ಲಾಕ್ಷಪಾಲನ್, ಜಿ.ಎ. ಮಂಜುನಾಥ್, ಸತೀಶ್ ಜೆ. ಬಾಳಿ, ಎಸ್. ಮಹೇಶ್, ಅಕ್ಷರ ಚಾರಿಟಬಲ್ ಟ್ರಸ್ಟ್ನ ಕಾರ್ಯದರ್ಶಿ ವೀಣಾ ನಾಯ್ಡು ಇದ್ದರು.
`ಮಹಿಳಾ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ~ ಕುರಿತು ಜ್ಯೋತಿ ಮುರುಳೀಧರ್, `ಮಹಿಳೆಯರ ಆಸ್ತಿ ಹಕ್ಕು~ ಕುರಿತು ಅನುಸೂಯ ಶ್ರೀಧರ್, `ಜೀವನಾಂಶ ಕಾಯ್ದೆ~ ಕುರಿತು ಜಯಾ ಶ್ರೀನಿವಾಸ್ ಉಪನ್ಯಾಸ ನೀಡಿದರು. ಭಾರತಿ ಪ್ರಾರ್ಥಿಸಿದರು. ಕೆ.ಎಲ್. ಭೋಜರಾಜ್ ಸ್ವಾಗತಿಸಿದರು. ಮಂಗಳಗೌರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.