ADVERTISEMENT

ಸಾಮಾನ್ಯ ಕಾರ್ಯಕರ್ತನಿಗೂ ಉತ್ತಮ ಸ್ಥಾನ

ಬಿಜೆಪಿ ಕಾರ್ಯಕರ್ತರ ನವಶಕ್ತಿ ಸಮಾವೇಶದಲ್ಲಿ ಶಾಸಕ ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 10:45 IST
Last Updated 15 ಮಾರ್ಚ್ 2018, 10:45 IST
ಹೊಳೆಹೊನ್ನೂರು ನಗರದಲ್ಲಿ ಬುಧವಾರ ನಡೆದ ಬಿಜಿಪಿ ಕಾರ್ಯಕರ್ತರ ನವಶಕ್ತಿ ಸಮಾವೇಶವನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‍.ರುದ್ರೇಗೌಡರು ಉದ್ಘಾಟಿಸಿದರು.
ಹೊಳೆಹೊನ್ನೂರು ನಗರದಲ್ಲಿ ಬುಧವಾರ ನಡೆದ ಬಿಜಿಪಿ ಕಾರ್ಯಕರ್ತರ ನವಶಕ್ತಿ ಸಮಾವೇಶವನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‍.ರುದ್ರೇಗೌಡರು ಉದ್ಘಾಟಿಸಿದರು.   

ಹೊಳೆಹೊನ್ನೂರು: ‘ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೂ ಉನ್ನತ ಸ್ಥಾನ ಪಡೆಯಬಹುದು ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನಮ್ಮ ಕಣ್ಮುಂದೆ ಇದ್ದಾರೆ’ ಎಂದು ಶಾಸಕ ಬಿ.ವೈ. ರಾಘವೇಂದ್ರ ಹೇಳಿದರು.

ನಗರದಲ್ಲಿ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ನವಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವ್ಯಕ್ತಿಗತವಾಗಿ ಪಕ್ಷ ಸಂಘಟನೆ ಆಗಬಾರದು. ಕಾರ್ಯಕರ್ತರ ಮುಖಾಂತರವೇ ಸಂಘಟನೆಗೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಕೆ.ಜಿ.ಕುಮಾರಸ್ವಾಮಿ ಅವರು ಶಾಸಕರಾಗಿದ್ದಾಗ ತುಂಗಾ ನದಿ ಏತ ನೀರಾವರಿ ಹಾಗೂ ಸನ್ಯಾಸಿ ಕೊಡಮಗ್ಗಿ– ಹೊಳಲೂರು ನಡುವೆ ಸೇತುವೆ ನಿರ್ಮಾಣ ಒಳಗೊಂಡಂತೆ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಆದರೆ, ಈಗಿನ ಶಾಸಕರು ಗುದ್ದಲಿ ಪೂಜೆ, ಉದ್ಘಾಟನೆಗೆಮಾತ್ರ ಸೀಮಿತವಾಗಿದ್ದಾರೆ ಎಂದು ಟೀಕಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಹಾಸಿಗೆ, ದಿಂಬು ಖರೀದಿಯಲ್ಲಿ ದೊಡ್ಡ ಹಗರಣವೇ ನಡೆದಿದೆ ಎಂದು ರಾಘವೇಂದ್ರ ದೂರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡರು, ‘ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡ ಆಯನೂರು ಮಂಜುನಾಥ, ‘ಈ ಹಿಂದೆ ನಡೆದ ಚುನಾವಣೆಯಲ್ಲಿ ನಾವು ಕೆಜೆಪಿ, ಬಿಜೆಪಿ ಎಂಬ ಎರಡು ದೋಣಿಯಲ್ಲಿ ನಿಂತು ಪ್ರಯಾಣ ಮಾಡಿದ್ದರಿಂದ ಈ ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಸೋಲಾಯಿತು. ಆದರೆ, ಮುಂದಿನ ಚುನಾವಣೆಯಲ್ಲಿ ಈ ರೀತಿಯಾಗುವುದಿಲ್ಲ. ಬಿ.ಎಸ್‍.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದೇ ನಮ್ಮೆಲ್ಲರ ಗುರಿಯಾಗಿದೆ’ ಎಂದರು.‌

ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಎಂ.ಎಸ್‍.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‍ ಸದಸ್ಯ ಎಂ.ಬಿ.ಭಾನು ಪ್ರಕಾಶ್‍, ಆರ್.ಕೆ.ಸಿದ್ದರಾಮಣ್ಣ, ಚನ್ನಬಸಪ್ಪ, ವಿ.ನಾರಾಯಣ ಸ್ವಾಮಿ, ಅಶೋಕ ನಾಯ್ಕ, ಶಾಂತಾಬಾಯಿ ಹಾಗೂ ಬಿಜೆಪಿ ಮುಖಂಡರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.