ADVERTISEMENT

ಸಿಇಟಿ ಸಹಾಯವಾಣಿ ಕೇಂದ್ರ ಕಾರ್ಯಾರಂಭ

2ಸಾವಿರ ರ‌್ಯಾಂಕ್‌ವರೆಗಿನ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 5:43 IST
Last Updated 6 ಜೂನ್ 2013, 5:43 IST

ಶಿವಮೊಗ್ಗ: ನಗರದ ಜವಾಹರಲಾಲ್ ನೆಹರೂ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜಿ (ಜೆಎನ್‌ಎನ್‌ಸಿಇ)ನಲ್ಲಿ ಸ್ಥಾಪಿಸಿದ ಸಿಇಟಿ ಸಹಾಯವಾಣಿ ಕೇಂದ್ರದಲ್ಲಿ ಬುಧವಾರದಿಂದ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಆರಂಭಗೊಂಡಿತು.

ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಸಿಇಟಿ ಸಹಾಯವಾಣಿ ಕೇಂದ್ರದ ಕಾರ್ಯಾಚರಣೆಗೆ ಬುಧವಾರ ಬೆಳಿಗ್ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೀವು ಇಷ್ಟಪಡುವ ಕೋರ್ಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳಿ; ಯಾವುದೇ ಬಲವಂತ ಮತ್ತು ಒತ್ತಡಕ್ಕೆ ಒಳಗಾಗಿ ಇಷ್ಟ ಇಲ್ಲದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಮುಂದೆ ತೊಂದರೆ ಪಡಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ರಾಜ್ಯದ ವಿದ್ಯಾರ್ಥಿಗಳು ಭಾಗ್ಯಶಾಲಿಗಳಾಗಿದ್ದು, ದೇಶದ ಯಾವುದೇ ಭಾಗದಲ್ಲಿ ಈ ರೀತಿಯ ಪಾರದರ್ಶಕ ಆಯ್ಕೆ ಅವಕಾಶ ಸಿಗುವುದಿಲ್ಲ. ಕೌನ್ಸೆಲಿಂಗ್ ಮೂಲಕ ವಿದ್ಯಾರ್ಥಿಗಳು ತಮಗೆ ಬೇಕಾದ ಕಡೆ ಸೀಟುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಎಂಜಿನಿಯರಿಂಗ್, ಮೆಡಿಕಲ್ ಪದವಿಗಳನ್ನು ಮುಗಿಸಿದ ನಂತರ ಸರ್ಕಾರಿ ಹುದ್ದೆಗೆ ಸೇರಲು ಆಸಕ್ತಿ ತೋರಿಸಬೇಕು ಎಂದ ಅವರು, ಮೆಡಿಕಲ್ ವ್ಯಾಸಂಗ ಮಾಡಿದವರು ಸರ್ಕಾರಿ ಆಸ್ಪತ್ರೆಗಳಿಗೆ ಸೇವೆಗೆ ಸೇರುವ ಮೂಲಕ ಸಮಾಜದ ಉನ್ನತಿಗೆ ಪ್ರಯತ್ನಿಸಬೇಕು ಎಂದರು.

ಸಿಇಟಿ ಮುಖ್ಯ ನೋಡಲ್ ಅಧಿಕಾರಿ ಡಾ.ನಾಗಮಣಿ ಮಾತನಾಡಿ, ಸಹಾಯವಾಣಿ ಕೇಂದ್ರದಲ್ಲಿ ಆರಂಭದಲ್ಲಿ ಸಹಾಯವಾಣಿ ಸ್ವಾಗತವಿದೆ. ತದನಂತರ ಕಾಯುವ ಕೊಠಡಿ ಇದೆ. ಮುಂದೆ ನೊಂದಣಿ ಕೊಠಡಿ ಇದೆ. ಅಲ್ಲಿ ಆನ್‌ಲೈನ್ ಕೌನ್ಸೆಲಿಂಗ್ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ತಿಳಿಸುವ ವಿಡಿಯೋ ಬಿತ್ತರಗೊಳ್ಳಲಿದೆ. ಪಕ್ಕದ ಕೊಠಡಿಯಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ ಎಂದರು.

ಈ ಕೊಠಡಿಯಲ್ಲಿ ಏಳು ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಅಲ್ಲಿರುವ ತಜ್ಞರು ದಾಖಲೆಗಳ ಪರಿಶೀಲನೆ ನಡೆಸುವರು ಎಂದು ಹೇಳಿದರು.
ಸಹಾಯವಾಣಿ ಕೇಂದ್ರ ವ್ಯಾಪ್ತಿಗೆ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾವೇರಿ ಜಿಲ್ಲೆಗಳ ವಿದ್ಯಾರ್ಥಿಗಳು ಬರುತ್ತಾರೆ. ಸಹಾಯವಾಣಿ ಕೇಂದ್ರದ ಮಾಹಿತಿಗೆ ದೂ: 08182-295456 ಸಂಪರ್ಕಿಸಬಹುದು ಎಂದರು.

ಬುಧವಾರ 1ರಿಂದ 2ಸಾವಿರವರೆಗೆ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳು ಭಾಗವಹಿಸುವರು. ತದನಂತರದ ದಿನಗಳಲ್ಲಿ ಪ್ರತಿ ದಿವಸ ಐದು ಸಾವಿರ ರ‌್ಯಾಂಕ್‌ವರೆಗಿನ ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದು ವಿವರಣೆ ನೀಡಿದರು.

ಸಹಾಯವಾಣಿ ಕೇಂದ್ರಕ್ಕೆ ದಾಖಲಾತಿಗಳ ಪರಿಶೀಲನೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಜೆಎನ್‌ಎನ್‌ಸಿಇ ವತಿಯಿಂದ ನಗರದ ಮಹಾವೀರ ವೃತ್ತದಿಂದ ಪ್ರತಿದಿನ ಬೆಳಿಗ್ಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜೆಎನ್‌ಎನ್‌ಸಿಇ ಪ್ರಾಂಶುಪಾಲ ಡಾ.ಆರ್.ಶ್ರೀನಿವಾಸರಾವ್ ಕುಂಠೆ ತಿಳಿಸಿದರು.

ಕೆನರಾ ಬ್ಯಾಂಕ್ `ವಿದ್ಯಾಭ್ಯಾಸ ಸಾಲ' ವ್ಯವಸ್ಥೆ
ಸಹಾಯವಾಣಿ ಕೇಂದ್ರದ ಎದುರಿಗೆ ಶಿವಮೊಗ್ಗದ ಕೆನರಾ ಬ್ಯಾಂಕ್ ವೃತ್ತ ಕಚೇರಿ ಪ್ರತ್ಯೇಕ ಕೌಂಟರ್ ತೆರೆದಿದ್ದು, ವೃತ್ತಿ ಶಿಕ್ಷಣ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಸ್ಥಳದಲ್ಲೇ ಅರ್ಜಿ ಪಡೆದು `ವಿದ್ಯಾಭ್ಯಾಸ ಸಾಲ' ಮಂಜೂರು ಮಾಡುವ ವ್ಯವಸ್ಥೆ ಮಾಡಿದೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ.ತಿಮ್ಮಯ್ಯ, ಖಜಾಂಚಿ ಅಶ್ವಥನಾರಾಯಣ ಶೆಟ್ಟಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ.ಕೆ.ನಾಗರಾಜ್, ಸಹಾಯವಾಣಿ ಕೇಂದ್ರದ ಹೆಚ್ಚುವರಿ ನೋಡಲ್ ಅಧಿಕಾರಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.