ADVERTISEMENT

ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ದೂರು

ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮ ಮರಳು ಸಾಗಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 10:19 IST
Last Updated 2 ಜನವರಿ 2014, 10:19 IST

ಹೊಸನಗರ: ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆ ಸಮೀಪದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ತ್ರಿಣಿವೆ ಗ್ರಾಮ ಪಂಚಾಯ್ತಿ ಹೊಸನಗರ ಪೊಲೀಸರಿಗೆ ದೂರು ನೀಡಿದೆ. ಲೋಕೋಪಯೋಗಿ ಇಲಾಖೆಯ ಆದೇಶದ ಅನ್ವಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಜಾಕ್ವೆಲ್ ಸುತ್ತ ಮುತ್ತಲಿನ 250 ಮೀಟರ್ ಸ್ಥಳದಲ್ಲಿ ಮರಳು ಗಣಿಗಾರಿಕೆ ನಿಷೇಧಿಸಿದ  ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾರೆ ಎಂಬುದು ಅವರ
ಆರೋಪ.

ಸಾರ್ವಜನಿಕ ಕುಡಿಯುವ ನೀರು ಸರಬರಾಜು ಯೋಜನೆಯ ಜಾಕ್ವೆಲ್ ಇರುವ ಶರಾವತಿ ನದಿ ಪಕ್ಕದ 250 ಮೀಟರ್ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಕುಡಿಯುವ ನೀರು ಸುವ್ಯವಸ್ಥೆ ಸಲುವಾಗಿ 250 ಮೀಟರ್ ಪ್ರದೇಶದಲ್ಲಿ ಮರಳು ಸಾಗಣೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಮರಳು ನಿಷೇಧಿಸಿ ನಾಮಫಲಕ ಅಳವಡಿಸಲಾಗಿದೆ. ಆದರೂ, ಮರಳು ದಂಧೆಕೋರರು ನಿರ್ಬಂಧಿತ ಪ್ರದೇಶವನ್ನು ಅತಿಕ್ರಮಿಸಿ ಮರಳು ಲೂಟಿ ಮಾಡುತ್ತಿದ್ದಾರೆ. ಈ ಸಂಬಂಧ ಪ್ರಶ್ನಿಸಲು ಹೋದ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಪೊಲೀಸರಿಗೆ ದೂರಿನಲ್ಲಿ  ತಿಳಿಸಿದ್ದಾರೆ.

ಅಧಿಕಾರಿಗಳ ಮೌನ: ಇಲ್ಲಿನ ಶರಾವತಿ ನದಿಯ ಇಕ್ಕೆಲಗಳಲ್ಲೂ ಅಕ್ರಮ, ಕಾನೂನು ಬಾಹಿರ ಮರಳು ಸಾಗಣೆ, ದಾಸ್ತಾನು ನಡೆಯುತ್ತಲೇ ಇದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನ ನೀಡದೆ ಮರಳು ಮಾಫಿಯಾಕ್ಕೆ ಸಾಥ್ ನೀಡುತ್ತಿದ್ದಾರೆ ಎಂದು
ದೂರಿದರು.

ಒಂದೇ ಮೂಲ : ತ್ರಿಣಿವೆ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಈ ಸ್ಥಳವೊಂದೇ  ನೀರಿನ ಮೂಲವಾಗಿದೆ. ಕಳೆದ ವರ್ಷ ಜಾಕ್ವೆಲ್ ಪಕ್ಕ ಬಾರೀ ಕಂದಕ ನಿರ್ಮಿಸಿದ ಮರಳು ಗಣಿಗಾರಿಕೆ ಮಾಡಿದ್ದರ ಫಲವಾಗಿ ವರ್ಷ ಪೂರ್ಣ ಕುಡಿಯುವ ನೀರಿಗೆ ತಾತ್ವಾರ ಆಗಿತ್ತು. ಅಕ್ರಮ ಮರಳು ಸಾಗಾಣಿಕೆದಾರರ ಮೇಲೆ ಕೂಡಲೇ ಪೊಲೀಸರು ಕ್ರಮ  ಕೈಗೊಳ್ಳಬೇಕು. ಇಲ್ಲವಾದ್ದಲ್ಲಿ ತಹಶೀಲ್ದಾರ್ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಕಾರ್ಗಡಿ ಜಯರಾಮ್, ಸದಸ್ಯ ಶಶಿಧರ ಪಟೇಲ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT