ADVERTISEMENT

ಸ್ವಸಹಾಯ ಗುಂಪುಗಳಿಗೆ ಶೇ 2ರ ಬಡ್ಡಿಯಲ್ಲಿ ಸಾಲ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 9:30 IST
Last Updated 9 ಜನವರಿ 2012, 9:30 IST

ಶಿವಮೊಗ್ಗ: ಸ್ವಸಹಾಯ ಗುಂಪುಗಳಿಗೆ ಶೇ. 2ರ ಬಡ್ಡಿದರದಲ್ಲಿ ಸಾಲ ನೀಡುವ ಸಂಬಂಧ ಮುಖ್ಯಮಂತ್ರಿ ಸದಾನಂದಗೌಡ ಅವರೊಂದಿಗೆ ಸಮಾಲೋಚನೆ ನಡೆಸಿ, ಈ ವರ್ಷದ ಬಜೆಟ್‌ನಲ್ಲಿಯೇ ಅದನ್ನು ಸೇರಿಸಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ಎನ್‌ಇಎಸ್ ಕ್ರೀಡಾಂಗಣದಲ್ಲಿ ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿರುವ ಕೊಡಚಾದ್ರಿ ವೈಭವದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಸಹಾಯ ಗುಂಪುಗಳಿಗೆ ಸಾಲವನ್ನು ನೀಡುವ ಸಂಬಂಧ ಸ್ವಆಸಕ್ತಿಯಿಂದ ಯತ್ನಿಸುತ್ತೇನೆ. ಶೇ. 2 ರಷ್ಟು ಬಡ್ಡಿದರದಲ್ಲಿ ಸ್ವಸಹಾಯ ಸಂಘಗಳಿಗೆ ಸಾಲ ನೀಡುವುದರಿಂದ ಸುಮಾರು 80 ಲಕ್ಷ ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತವೆ. ಜತೆಗೆ, ರಾಜ್ಯದ ಸುಮಾರು 2.50 ಕೋಟಿ ಜನರಿಗೆ ಈ ಯೋಜನೆಯಿಂದ ನೇರವಾಗಿ ನೆರವಾಗಬಹುದಾಗಿದೆ ಎಂದು ಅಭಿಪ್ರಾಯಟ್ಟರು.

ಈ ರೀತಿಯ ಕಾರ್ಯಕ್ರಮ ನಡೆಯುತ್ತಿರುವುದು ದೇಶ ಹಾಗೂ ರಾಜ್ಯದಲ್ಲಿ ಇಲ್ಲಿ ಮಾತ್ರ. ಈ ಕಾರ್ಯಕ್ರಮಕ್ಕೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಇದು ಕೇವಲ ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗದೇ, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹರಡುವಂತಾಗಬೇಕು ಎಂದರು.

ಇಂತಹ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಪುರುಷರಿಗಿಂತ ತಾವೇನು ಕಡಿಮೆಯಿಲ್ಲ ಎನ್ನುವುದನ್ನು ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಇದೊಂದು ಯಶಸ್ಸು ಅಲ್ಲ. ಬದಲಾಗಿ ಇದೊಂದು ಕ್ರಾಂತಿ ಎಂದು ಶ್ಲಾಘಿಸಿದರು.

ಪ್ರಾಸ್ತಾವಿಕ ಮಾತನಾಡಿದ  ರಾಜ್ಯ ಅಪೆಕ್ಸ್‌ಬ್ಯಾಂಕ್ ಅಧ್ಯಕ್ಷ ಹಾಗೂ ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಸರ್ಕಾರ ಸ್ವಸಹಾಯ ಗುಂಪುಗಳಿಗೆ ಶೇ. 2ರ ಬಡ್ಡಿದರದಲ್ಲಿ ಸಾಲ ನೀಡಿದ್ದಲ್ಲಿ, ಮುಂದಿನ ವರ್ಷದೊಳಗೆ ಸುಮಾರು 5 ಲಕ್ಷ ಸ್ವಸಹಾಯ ಗುಂಪು ರಚನೆಯಾಗಲು ಸಾಧ್ಯ ಎಂದರು.
ಅಲ್ಲದೇ, ಶೇ. 2ರ ಬಡ್ಡಿದರದಲ್ಲಿ ಸಾಲ ನೀಡಿದರೆ 7-8 ಸ್ವಸಹಾಯ ಗುಂಪುಗಳು ಸೇರಿ ಕಿರು ಉದ್ಯಮ ಸ್ಥಾಪಿಸಲು ಸಹ ಸಾಧ್ಯವಾಗುತ್ತದೆ ಎಂದರು.

ನಗರಸಭಾ ಅಧ್ಯಕ್ಷ  ಎಸ್.ಎನ್. ಚನ್ನಬಸಪ್ಪ, ಕಾಡಾ ಅಧ್ಯಕ್ಷ ಶೇಖರಪ್ಪ, ಶಿವಮೊಗ್ಗ ಹಾಲು ಒಕ್ಕೂಟದ ಶಿಮೂಲ್ ಅಧ್ಯಕ್ಷ ಕೆ.ಎಲ್. ಜಗದೀಶ್ವರ್, ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸಂಜಯ್ ಬಿಜ್ಜೂರು,  ಹಾಪ್‌ಕಾಮ್ಸ ಅಧ್ಯಕ್ಷ ಸೋಮಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.
 

ವೈಭವದಲ್ಲಿ ಇಂದು...

ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್: ಎನ್‌ಇಎಸ್ ಕ್ರೀಡಾಂಗಣ- ಕುವೆಂಪು ರಂಗಮಂದಿರ. ಕೊಡಚಾದ್ರಿ ವೈಭವ. ಸಭಾ ಕಾರ್ಯಕ್ರಮ ಉದ್ಘಾಟನೆ:ಜಿ.ಪಂ. ಅಧ್ಯಕ್ಷರು ಶುಭಾ ಕೃಷ್ಣಮೂರ್ತಿ. ಅತಿಥಿಗಳು: ಎಂಪಿಎಂ ಅಧ್ಯಕ್ಷ ಅರಗ ಜ್ಞಾನೇಂದ್ರ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್, ವಿಧಾನ ಪರಿಷತ್ ಸದಸ್ಯರು ಭಾರತಿ ಶೆಟ್ಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಸನ್. ಅಧ್ಯಕ್ಷತೆ: ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ. ಸಂಜೆ 6ಕ್ಕೆ. ಸಾಂಸ್ಕೃತಿಕ ಕಾರ್ಯಕ್ರಮ: ಸ್ಥಳೀಯ ಕಲಾವಿದರಿಂದ. ಸಂಜೆ 5ಕ್ಕೆ. ಹೇಮಂತ್ ಮತ್ತು ಸಂಗಡಿಗರಿಂದ ಸಂಗೀತ ಸಂಜೆ ಕಾರ್ಯಕ್ರಮ. ಸಂಜೆ 7ಕ್ಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.