ADVERTISEMENT

‘ಭಯೋತ್ಪಾದನೆ ನಿಯಂತ್ರಿಸುವಲ್ಲಿ ಕೇಂದ್ರ ವಿಫಲ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 5:35 IST
Last Updated 16 ಡಿಸೆಂಬರ್ 2013, 5:35 IST

ಶಿವಮೊಗ್ಗ: ಭಯೋತ್ಪಾದನೆ ನಿಯಂತ್ರಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ದೂರಿದರು.

ನಗರದ ಸೈನ್ಸ್ ಮೈದಾನದಲ್ಲಿ ಭಾನುವಾರ ಸರ್ದಾರ್ ವಲ್ಲಭಬಾಯಿ ಪಟೇಲ್ ರ ಪುಣ್ಯತಿಥಿ ಅಂಗವಾಗಿ ಹಮ್ಮಿಕೊಂಡಿದ್ದ ಏಕತಾ ಓಟ ಮತ್ತು ನಡಿಗೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದ್ದು, ಅದರ ನಿಯಂತ್ರಣಕ್ಕೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳದೆ ಮೊಂಡುತನವನ್ನು ಕಾಂಗ್ರೆಸ್ ಸರ್ಕಾರ ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏಕತಾ ಓಟವು ದೇಶದಲ್ಲಿಸಂಚಲನ ಮೂಡಿಸಿದ್ದು, 550 ರಾಜ ಸಂಸ್ಥಾನಗಳನ್ನು ಒಗ್ಗೂಡಿಸಿ, ಅಖಂಡ ಭಾರತ ಒಕ್ಕೂಟ ರೂಪಿಸಿದ ಕೀರ್ತಿ ವಲ್ಲಭಬಾಯಿ ಪಟೇಲರಿಗೆ ಸಲ್ಲುತ್ತದೆ ಎಂದರು. ಸಾಧನೆಗಾಗಿ ಜಾಗೃತಿ ಮೂಡಿಸಲು ಇಂತಹ ಓಟ ಆಯೋಜನೆ ಮಾಡಲಾಗಿದ್ದು, ಯುವಜನತೆಯಲ್ಲಿ ವಲ್ಲಭಬಾಯಿ ಪಟೇಲರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಇಂದಿನ ಯುವಪೀಳಿಗೆ ಸರ್ದಾರ್ ವಲ್ಲಭಬಾಯಿ ಪಟೇಲರ ಅವರ ಉದಾತ್ತ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದ ಅವರು, ಗುಜರಾತಿನಲ್ಲಿ ನಿರ್ಮಾಣವಾಗುತ್ತಿರುವ ಸುಮಾರು 182ಮೀ. ಎತ್ತರದ ಪಟೇಲರ ಮೂರ್ತಿ ಯುವಕರಿಗೆ ಸ್ಪೂರ್ತಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮುಖಂಡರಾದ ಮಹೇಂದ್ರನಾಥ್, ಜ್ಞಾನೇಶ್ವರ್, ದತ್ತಾತ್ರಿ, ಚನ್ನಬಸಪ್ಪ, ರತ್ನಾಕರ ಶೆಣೈ, ಡಿ.ಎಸ್. ಅರುಣ್, ಬಿ.ಆರ್. ಮಧುಸೂದನ್, ಭವಾನಿರಾವ್ ಮೋರೆ, ಮೋಹನ ರೆಡ್ಡಿ, ಹೃಷಿಕೇಶ ಪೈ ಮತ್ತಿತರರು ಉಪಸ್ಥಿತರಿದ್ದರು.   ಏಕತಾ ಓಟದಲ್ಲಿ ಸುಮಾರು 1,500ಕ್ಕಿಂತ ಹೆಚ್ಚು ಯುವಕರು ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.

ಈ ಓಟಕ್ಕಾಗಿ ಸುಮಾರು 4ಲಕ್ಷದ 65ಸಾವಿರ ಜನರು ಆನ್ ಲೈನ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.