ADVERTISEMENT

11ಕ್ಕೆ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:55 IST
Last Updated 8 ಅಕ್ಟೋಬರ್ 2011, 9:55 IST

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅ. 11ರಂದು ಸಂಜೆ 6.30ಕ್ಕೆ ನಗರದ ವಿನೋಬನಗರ ಬಡಾವಣೆಯ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ 76ನೆಯ ಸಾಹಿತ್ಯ ಹುಣ್ಣಿಮೆಯ ಕಾರ್ಯಕ್ರಮ ಹಮ್ಮಿಕೊಂಡಿದೆ.

 ಸಾಹಿತ್ಯ ಹುಣ್ಣಿಮೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಉದ್ಘಾಟಿಸಲಿದ್ದಾರೆ. ಶಾಸಕ ಕೆ. ಜಿ. ಕುಮಾರಸ್ವಾಮಿ, ಶುಭಮಂಗಳಾ ಟ್ರಸ್ಟ್ ಅಧ್ಯಕ್ಷ ಕೆ. ಇ. ಕಾಂತೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಅತಿಥಿಗಳಾಗಿ ಭಾಗವಹಿಸುವರು.

ಬಿ.ಎಸ್. ರಾಮಭಟ್ಟ ಅವರು ರಚಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ನಗರ ಪ್ರಾಂತ್ಯದ ರೈತರ ಬಂಡಾಯ ಕೃತಿಯನ್ನು ಸಾಹಿತಿ ಪ್ರೊ.ಕೆ. ಓಂಕಾರಪ್ಪ ಅವರು ಪರಿಚಯಿಸುವರು.  ಇದೇ ಸಂದರ್ಭದಲ್ಲಿ ಮಂಜುನಾಥ ವಿ. ಶೇಟ್ ಅವರು ಬರೆದ ಭಕ್ತಿ ಭಜನಾಮತ ಕೃತಿ ಬಿಡುಗಡೆಯಾಗಲಿದೆ. ಕವಿಗಳಾದ ಬಿ.ಟಿ.ಎಂ. ಗುರುಸಿದ್ಧಶಾಸ್ತ್ರಿ, ಮಾರ್ಪಳ್ಳಿ ಆರ್. ಮಂಜುನಾಥ, ಎನ್. ಎಂ. ದತ್ತಾತ್ರಿ ಜೋಯ್ಸ  ಕವನ ವಾಚಿಸಲಿದ್ದಾರೆ. ಮಂಜುನಾಥ ಭಟ್ಟ ಮತ್ತು ಡಿ. ಗಣೇಶ್ ಚುಟುಕು ವಾಚಿಸುವರು.

ನೋಂದಣಿ ಕಡ್ಡಾಯ
  
ಸಾಮೂಹಿಕ ವಿವಾಹ ಆಯೋಜಿಸುವ ಸಂಘಟಕರು ಇನ್ನು ಮುಂದೆ ಕಡ್ಡಾಯವಾಗಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ನೋಂದಣಿ ಮಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಖಾಸಗಿ ವ್ಯಕ್ತಿಗಳು, ಸಂಘಟನೆಗಳು, ದೇವಸ್ಥಾನಗಳು, ಟ್ರಸ್ಟ್‌ಗಳು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದನ್ನು ಇಲಾಖೆ ಗಮನಿಸಿದ್ದು, ಈ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳನ್ನು ಸಮರ್ಪಕವಾಗಿ, ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಆಯೋಜಿಸುವ ಹಾಗೂ ಬಾಲ್ಯ ವಿವಾಹದಂತಹ ಸಾಮಾಜಿಕ ಅನಿಷ್ಠವನ್ನು ತಡೆಗಟ್ಟುವ ದೃಷ್ಟಿಯಿಂದ ಕೆಲವು ಮಾರ್ಗ ಸೂಚಿ ಅನುಸರಿಸಬೇಕು ಎಂದು ಸೂಚಿಸಿದೆ.

ಪ್ರತಿ ಐದು ವರ್ಷಕ್ಕೆ ಒಮ್ಮೆ ನೋಂದಣಿ ನವೀಕರಿಸಿಕೊಳ್ಳಬೇಕು. ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸುವ ವಧೂ- ವರರ ಸಂಪೂರ್ಣ ವಿವರವನ್ನು ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರಿಗೆ ಸಲ್ಲಿಸಿ, ಅನುಮತಿ ಪಡೆದು, ನಿಯಮಾನುಸಾರ ಕಾರ್ಯಕ್ರಮ ಏರ್ಪಡಿಸಬೇಕು. ಸಾಮೂಹಿಕ ವಿವಾಹ ಸಂಘಟಕರು ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಉಪ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

9ಕ್ಕೆ ನಾಗಶ್ರೀ ಯಕ್ಷಗಾನ
ಧಾರೇಶ್ವರ  ಸಿದ್ಧಿವಿನಾಯಕ ಯಕ್ಷಗಾನ ನಾಟ್ಯ ಸಂಘದ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಅ. 9ರಂದು ಸಂಜೆ 6ರಿಂದ 10ರವರೆಗೆ ನಾಗಶ್ರೀ ಯಕ್ಷಗಾನ  ಪ್ರದರ್ಶನ ಹಮ್ಮಿಕೊಂಡಿದೆ.

ವಿಶೇಷವಾಗಿ ಶಿಥಿಲ ಮಹಾರಾಜನ ಪಾತ್ರದಲ್ಲಿ ನಾಟ್ಯಸಾಮ್ರೋಟ ಕಣ್ಣೀಮನೆ ಗಣಪತಿ ಹೆಗಡೆ ಭಾಗವಹಿಸಲಿದ್ದು, ನಿಲ್‌ಕೋಡಾ ಶಂಕರ ಹೆಗಡೆ, ನಾಗಶ್ರೀ, ಹಳ್ಳಾಡಿ ಜಯರಾಮ ಶೆಟ್ಟಿ ಕೈರವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿದ್ವಾನ್ ದತ್ತಮೂರ್ತಿ ಭಟ್, ಮಂದರ್ತಿ ಪ್ರಸನ್ನ ಶೆಟ್ಟಿಗಾರ್, ಹಕ್ಲಾಡಿ ರವೀಂದ್ರ ಶೆಟ್ಟಿ, ಮತ್ತಿತರರು ವಿವಿಧ ಪಾತ್ರ ನಿರ್ವಹಿಸಲಿದ್ದಾರೆ.

ಜಿ.ಆರ್. ಕಾಳಿಂಗ ನಾವುಡರ  ಶೈಲಿಯಲ್ಲಿ ರಾಘವೇಂದ್ರ ಆಚಾರ್ಯ ಭಾಗವತಿಕೆ, ಮದ್ದಳೆ ಕಡತೋಕ ಸುನೀಲ್  ಭಂಡಾರಿ, ಚೆಂಡೆ ಮೂರೂರು ಸುಬ್ರಹ್ಮಣ್ಯ  ಹೆಗಡೆ ಸಹಕರಿಸಲಿದ್ದಾರೆ. ಆದಿಚುಂಚನಗಿರಿ  ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸುವರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.