ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಜ. 20ರಂದು ನಗರಕ್ಕೆ ಆಗಮಿಸಲಿದ್ದು, ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ, ನಗರ ಪಾಲಿಕೆ ಆವರಣದಲ್ಲಿ ಸ್ಥಾಪಿಸಿರುವ ಅಂಬೇಡ್ಕರ್ ಪ್ರತಿಮೆ ಅನಾವರಣ ಸೇರಿದಂತೆ ವಿವಿಧ ಕಾಮಗಾರಿ ಉದ್ಘಾಟಿಸಲಿದ್ದಾರೆ.
ವಿವಿಧ ಕಾಮಗಾರಿಗೆ ಶಿಲಾನ್ಯಾಸ: ನಗರ ಪಾಲಿಕೆ ಆವರಣದಲ್ಲಿ ₹ 60 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 11 ಅಡಿ ಎತ್ತರದ ಅಂಬೇಡ್ಕರ್ ಕಂಚಿನ ಪ್ರತಿಮೆ, ಗಾಂಧಿ ಪಾರ್ಕ್ನಲ್ಲಿ ನಿರ್ಮಿಸಿದ ₹ 23 ಲಕ್ಷ ವೆಚ್ಚದ 100 ಅಡಿ ಎತ್ತರದ ಧ್ವಜಸ್ತಂಭ, ಗೋಪಾಳದಲ್ಲಿ ನಿರ್ಮಿಸಿದ ₹ 6 ಕೋಟಿ ವೆಚ್ಚದ ಕ್ರೀಡಾ ಸಂಕೀರ್ಣ, ತ್ಯಾವರೆಕೊಪ್ಪ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ನಿರ್ಮಿಸಿದ ₹ 1.90 ಕೋಟಿ ವೆಚ್ಚದ ಕಿರು ಆರೋಗ್ಯ ಕೇಂದ್ರ ಸೇರಿದಂತೆ ಹಲವು ಕಟ್ಟಡ ಉದ್ಘಾಟಿಸುವರು.
ಗಾರ್ಡನ್ ಏರಿಯಾದಲ್ಲಿ ನಿರ್ಮಿಸುತ್ತಿರುವ ₹ 5.63 ಕೋಟಿ ವೆಚ್ಚದ ಹೂ, ಹಣ್ಣು, ತರಕಾರಿ ಮಾರುಕಟ್ಟೆ, ಮುಖ್ಯ ಬಸ್ನಿಲ್ದಾಣದ ಬಳಿಯ ₹ 2 ಕೋಟಿ ವೆಚ್ಚದ ಪಾದಚಾರಿ ಮೇಲು ಸೇತುವೆ,₹ 40 ಲಕ್ಷ ವೆಚ್ಚದಲ್ಲಿ ಸೋಮಿನಕೊಪ್ಪ ಉರ್ದು ಶಾಲೆ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವರು ಎಂದು ಶಾಸಕ ಕೆ.ಬಿ.ಪ್ರಸನ್ನಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಗಳ ನಂತರ ಮಧ್ಯಾಹ್ನ ಒಂದು ಗಂಟೆಗೆ ಬಿ.ಎಚ್.ರಸ್ತೆಯ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಚಿವರಾದ ಕಾಗೋಡು ತಿಮ್ಮಪ್ಪ, ರೋಷನ್ ಬೇಗ್, ಎಚ್.ಆಂಜನೇಯ, ಸಂಸತ್ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕರಾದ ಶಾರದಾ ಪೂರ್ಯಾನಾಯ್ಕ, ಆರ್. ಪ್ರಸನ್ನಕುಮಾರ್, ಎಂ.ಬಿ.ಭಾನುಪ್ರಕಾಶ್, ಮೇಯರ್ ಎಸ್.ಕೆ.ಮರಿಯಪ್ಪ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಮರಿಯಪ್ಪ, ಪಾಲಿಕೆ ಸದಸ್ಯರಾದ ಪಿ.ವಿ. ವಿಶ್ವನಾಥ್, ಎಚ್.ಸಿ. ಯೋಗೀಶ್, ‘ಸೂಡಾ’ ಅಧ್ಯಕ್ಷ ಖಾಜಿ ಉಸ್ಮಾನ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.