ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಿದ ಅನೇಕ ಭಾಗ್ಯಗಳು ಜನರಿಗೆ ತಲುಪದೆ ಆ ಯೋಜನೆಗಳು ವಿಫಲವಾಗಿವೆ ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಿಶಿಷ್ಟ ಪಂಗಡ ವಿಭಾಗದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಬಹುತೇಕ ನೀರಾವರಿ ಯೋಜನೆಗಳು ವಿಫಲಗೊಂಡಿವೆ. ರೈತರಿಗೆ ಅಗತ್ಯವಿರುವ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸಿಲ್ಲ. ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂರಿದರು.
ನೀರಾವರಿ ಸಚಿವರು ಹಾಗೂ ಸಂಬಂಧಪಟ್ಟವರ ಮೇಲೆ ಜೆಡಿಎಸ್ ನಿರಂತರವಾಗಿ ಒತ್ತಡ ಹಾಕಿದ ಪರಿಣಾಮ ತುಂಗಾ ಏತ ನೀರಾವರಿ ಯೋಜನೆಯ ಮೂಲಕ ಗೌಡನಕೆರೆಗೆ ನೀರು ಹರಿದಿದೆ. ಆದರೆ, ‘ನಮ್ಮಿಂದಲೇ ಅದು ಸಾಧ್ಯವಾಗಿದೆ’ ಎಂದು ಬೇರೆ ಪಕ್ಷದ ಪ್ರತಿನಿಧಿಗಳು ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ವಾಲ್ಮೀಕಿ ಸಮಾಜದ ಅಭಿವೃದ್ಧಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ನಿರ್ಲಕ್ಷ್ಯ ವಹಿಸಿವೆ. ಪರಿಶಿಷ್ಟ ಪಂಗಡಕ್ಕೆ ಸಮಾಜವನ್ನು ಸೇರಿಸುವಲ್ಲಿ ಮಾಜಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಪಾತ್ರಮುಖ್ಯವಾಗಿದೆ. ಜನಪರ ಯೋಜನೆಗಳಜಾರಿಗೊಳಿಸಲು ಜೆಡಿಎಸ್ ಪಕ್ಷಅಧಿಕಾರಕ್ಕೆ ಬರಬೇಕಿದೆ’ ಎಂದರು.
ಜೆಡಿಎಸ್ ಮುಖಂಡ ಎಚ್.ಟಿ.ಬಳಿಗಾರ್ ಮಾತನಾಡಿ, ‘ಕಾಂಗ್ರೆಸ್ ಜಾರಿಗೊಳಿಸಿರುವ ಎಲ್ಲಾ ಭಾಗ್ಯಗಳು ದೌರ್ಭಾಗ್ಯಗಳಾಗಿವೆ. ಕಾಂಗ್ರೆಸ್, ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಆದ್ದರಿಂದ ಜೆಡಿಎಸ್ ಅನ್ನು ಜನರು ಬಯಸುತ್ತಿದ್ದಾರೆ’ ಎಂದರು.
ಜೆಡಿಎಸ್ ಎಸ್.ಟಿ ಘಟಕದ ರವಿಕುಮಾರ್, ಗ್ರಾಮಾಂತರ ಘಟಕದ ಕ್ಷೇತ್ರದ ಕಾರ್ಯಾಧ್ಯಕ್ಷ ಕಾಂತರಾಜು, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಾದಾಪೀರ್, ಪ್ರಮುಖರಾದ ಗೀತಾ, ಸತೀಶ್, ನೇತ್ರಾ, ಹನುಮಂತಪ್ಪ, ಹೀರಾನಾಯ್ಕ, ಬಸವರಾಜ್, ಲಿಂಗರಾಜು, ಸದಾಶಿವಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.