ADVERTISEMENT

ಮುಸ್ಲಿಮರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 5:59 IST
Last Updated 6 ಜನವರಿ 2018, 5:59 IST

ಭದ್ರಾವತಿ: ‘ಅತಿ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿರುವ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಅನ್ನು ಮುಸ್ಲಿಮರಿಗೆ ನೀಡಬೇಕು ಎಂದು ಅಹಿಂದ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ವಿ.ಗೋವಿಂದಸ್ವಾಮಿ ಆಗ್ರಹಿಸಿದರು.

‘ಕ್ಷೇತ್ರದಲ್ಲಿ 40 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಮುಸ್ಲಿಮರು ಪಕ್ಷಕ್ಕಾಗಿ ಸದಾಕಾಲ ದುಡಿದಿದ್ದಾರೆ. ಅಲ್ಪಸಂಖ್ಯಾತರಿಗೆ ಟಿಕೆಟ್‌ ಕೇಳುವುದರಲ್ಲಿ ಯಾವುದೇ ಒಳ ರಾಜಕೀಯವಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದೇವೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಹಾಸನ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಜಾತಿ ರಾಜಕಾರಣದಿಂದಾಗಿ ಅಪಾರ ಸಂಖ್ಯೆಯಲ್ಲಿರುವ ಮುಸ್ಲಿಮರಿಗೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ಶಾಮನೂರು ಶಿವಶಂಕರಪ್ಪ, ವಡ್ನಾಳ್ ರಾಜಣ್ಣ ಅವರ ಹಿಡಿತದಲ್ಲಿ ಕ್ಷೇತ್ರಗಳು ಸಿಲುಕಿವೆ. ಈ ಬಾರಿ ಮುಸ್ಲಿಮರಿಗೆ ಟಿಕೆಟ್‌ ನೀಡದಿದ್ದರೆ ಹಲವು ಕ್ಷೇತ್ರಗಳನ್ನು ಪಕ್ಷ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ADVERTISEMENT

ನಗರಸಭಾ ಸದಸ್ಯ ಮುರ್ತುಜಾ ಖಾನ್‌ ಮಾತನಾಡಿ, ‘ಅಲ್ಪಸಂಖ್ಯಾತರ ಮತಗಳಿಂದ ಕಾಂಗ್ರೆಸ್‌ಗೆ ಜೀವ ಲಭಿಸುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಲು 20 ಮಂದಿಯ ನಿಯೋಗ ದೆಹಲಿಗೆ ತೆರಳಿ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ, ಅಹಮದ್ ಪಟೇಲ್, ಗುಲಾಂನಬಿ ಆಜಾದ್ ಹಾಗೂ ರಾಜ್ಯದ ಮುಖಂಡರಾದ ಜಾಫರ್ ಷರೀಫ್, ಸಿ.ಎಂ.ಇಬ್ರಾಹಿಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಮುಸ್ಲಿಂ ಮುಖಂಡರಾದ ಮುನಾವರ್ ಸಾಬ್, ಗೌಸ್ ಅನ್ವರ್ ಪಾಷಾ, ಮಂಜುನಾಥ್, ಸಕಲೇನ್ ಸಾಬ್, ಸಯ್ಯದ್‌ ಸಾದಾತ್ ಖಾಜಿ, ಕೂಲಿಬ್ಲಾಕ್ ಮಸೀದಿ ಅಧ್ಯಕ್ಷ ಅಮೀರ್ ಜಾನ್, ಅಬ್ದುಲ್ ಸತ್ತಾರ್‌ಸಾಬ್‌, ಶೇಖ್ ಮುಕ್ತಿಯಾರ್ ಅಹಮದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.