ADVERTISEMENT

ಹೊಸನಗರ ತಾಲ್ಲೂಕು ಪಂಚಾಯ್ತಿ ಜಮಾಬಂದಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 10:34 IST
Last Updated 26 ಜನವರಿ 2018, 10:34 IST

ಹೊಸನಗರ: ತಾಲ್ಲೂಕು ಪಂಚಾಯ್ತಿಯ ಸುಮಾರು ₹ 48 ಕೋಟಿ ಅನುದಾನದಲ್ಲಿ ₹ 43.54 ಕೋಟಿ 2016–17ನೇ ಸಾಲಿನ ವಿವಿಧ ಯೋಜನೆಯಲ್ಲಿ ಖರ್ಚು ಮಾಡಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೇಳಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ 2016–17ನೇ ಸಾಲಿನ ಜಮಾಬಂದಿ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.

ಗ್ರಾಮ ಪಂಚಾಯ್ತಿಯಲ್ಲಿ ಲಭ್ಯ ಇರುವ 14ನೇ ಹಣಕಾಸು ಅನುದಾನ ಹಾಗೂ ಎಸ್ರೋ ಅನುದಾನದಲ್ಲಿ ಸರ್ಕಾರದ ನಿಯಮಾನುಸಾರ ಕ್ರಿಯಾ ಯೋಜನೆ ತಯಾರಿಸಿ, ಮಂಜೂರು ಮಾಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ADVERTISEMENT

ಎಲ್ಲಾ ಗ್ರಾಮ ಹಾಗೂ ವಾರ್ಡ್ ಸಭೆಗಳು ನಿಗದಿತ ಸಮಯಕ್ಕೆ ಆಗಿದೆ. ಮುಂಬರುವ ವಿಧಾನಸಭಾ ಚುನಾವಣೆ ನಿಮಿತ್ತ ಮುಂದಿನ ಗ್ರಾಮ ಸಭೆಗಳನ್ನು ತಿಂಗಳು ಮುಂಚೆ ಮಾಡಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪ ಗೌಡ ಮಾತನಾಡಿ, ‘ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಪಂಚಾಯ್ತಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಯಡೂರು ಗ್ರಾಮ ಪಂಚಾಯ್ತಿಗೆ ಅಭಿವೃದ್ಧಿ ಅನುದಾನ ಇನ್ನೂ ಬಿಡುಗಡೆ ಆಗಿಲ್ಲ. ಈ ಕುರಿತು ಕೂಡಲೆ ಬಿಡುಗಡೆ ಮಾಡಬೇಕು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅನುದಾನದಲ್ಲಿ ಹೆಚ್ಚಿನ ಪಾಲು ಕುಡಿಯುವ ನೀರು, ನೈರ್ಮಲ್ಯಕ್ಕೆ ಬಳಸಿಕೊಳ್ಳಬೇಕು. ಶಾಲೆಗಳಲ್ಲಿ ಬಿಸಿ ಊಟ ತಯಾರಿಕೆಗೆ ಹಾಗೂ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.

₹ 50 ಕೋಟಿ ಅನುದಾನ ಸಭೆಗೆ ನೀರಸ ಪ್ರತಿಕ್ರಿಯೆ: ತಾಲ್ಲೂಕು ಪಂಚಾಯ್ತಿ ಅನುದಾನದ ಜಮಾಬಂದಿಗೆ 12 ಸದಸ್ಯರಲ್ಲಿ ಅಧ್ಯಕ್ಷ ವಾಸಪ್ಪ ಗೌಡ ಹಾಗೂ ಸದಸ್ಯ ಸುಬ್ರಹ್ಮಣ್ಯ ಮಾತ್ರ ಹಾಜರಿದ್ದರು. ಸರಿ ಸುಮಾರು ₹ 50 ಕೋಟಿ ವ್ಯವಹಾರದ ಜಮಾ– ಖರ್ಚು ಸಭೆಯಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕರು ಭಾಗವಹಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.