ADVERTISEMENT

ಎಪಿಎಂಸಿ ಕಾರ್ಯದರ್ಶಿ, ಲೈಸೆನ್ಸ್ ವರ್ಕರ್ ಲೋಕಾಯುಕ್ತ ಬಲೆಗೆ

ತರಕಾರಿ ಮಳಿಗೆ ಹಂಚಿಕೆಗಾಗಿ ವ್ಯಾಪಾರಿಯಿಂದ ಲಂಚ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 16:31 IST
Last Updated 4 ಮಾರ್ಚ್ 2024, 16:31 IST
ಕೆ.ಕೋಡಿಗೌಡ
ಕೆ.ಕೋಡಿಗೌಡ   

ಶಿವಮೊಗ್ಗ: ಮಳಿಗೆ ಹಂಚಿಕೆ ಮಾಡಲು ತರಕಾರಿ ವ್ಯಾಪಾರಿಯಿಂದ ₹ 50,000 ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾರ್ಯದರ್ಶಿ ಕೆ.ಕೋಡಿಗೌಡ ಹಾಗೂ ಲೈಸೆನ್ ವರ್ಕರ್ ಕೆ.ಎ. ಯೋಗೀಶ್ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಎಪಿಎಂಸಿ ವ್ಯಾಪ್ತಿಯ ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ 16 ಮಳಿಗೆಗಳನ್ನು ವ್ಯಾಪಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ 16ನೇ ಸಂಖ್ಯೆಯ ಮಳಿಗೆಯಲ್ಲಿ ಶಿವಮೊಗ್ಗದ ಗೋಪಾಳದ ಕೆಎಚ್‌ಬಿ ಕಾಲೊನಿ ನಿವಾಸಿ ರವೀಂದ್ರ ವಿ.ನೇರಳೆ ಸಗಟು ದರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಾರೆ.

ಪ್ರಾಂಗಣದಲ್ಲಿನ 16 ಮಳಿಗೆಗಳ ಪೈಕಿ ಮೊದಲ 14 ಮಳಿಗೆಗಳ ಪುನರ್‌ ಹಂಚಿಕೆ ಮಾಡಲು ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ. ಆ ಮಳಿಗೆಗಳ ಪುನರ್‌ ಹಂಚಿಕೆ ವೇಳೆ ತಮ್ಮನ್ನೂ ಪರಿಗಣಿಸುವಂತೆ ರವೀಂದ್ರ ಅವರು ಎಪಿಎಂಸಿ ಕಾರ್ಯದರ್ಶಿ ಕೆ.ಕೋಡಿಗೌಡ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು.

ADVERTISEMENT

‘ಪುನರ್‌ ಹಂಚಿಕೆ ವೇಳೆ ಮಳಿಗೆ ಮಂಜೂರು ಮಾಡಲು ಖರ್ಚು ಬರುತ್ತದೆ’ ಎಂದು ಹೇಳಿದ್ದ ಕೋಡಿಗೌಡ, ಅದಕ್ಕೆ ಎಪಿಎಂಸಿಯ ಲೈಸೆನ್ಸ್ ವರ್ಕರ್ ಯೋಗೀಶ್‌ನನ್ನು ಭೇಟಿಯಾಗುವಂತೆ ಸೂಚಿಸಿದ್ದರು ಎನ್ನಲಾಗಿದೆ.

‘ಕಾರ್ಯದರ್ಶಿ ಸೂಚನೆಯಂತೆ ಯೋಗೀಶ್‌ ಭೇಟಿ ಆದಾಗ ಅವರು ₹ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಕೋರಿಕೆ ಮೇರೆಗೆ ₹ 1 ಲಕ್ಷಕ್ಕೆ ಒಪ್ಪಿಕೊಂಡಿದ್ದರು’ ಎಂದು ರವೀಂದ್ರ ಅವರು ಶಿವಮೊಗ್ಗ ಲೋಕಾಯುಕ್ತ ಡಿವೈಎಸ್‌ಪಿ ಕಚೇರಿಗೆ ದೂರು ನೀಡಿದ್ದರು.

ಆರೋಪಿಗಳು ರವೀಂದ್ರ ಅವರಿಂದ ₹ 50,000 ಮುಂಗಡವಾಗಿ ಪಡೆಯುವಾಗ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.