ADVERTISEMENT

ಸಿಎಂ, ಡಿಸಿಎಂ ರಾಜ್ಯದ ಜನರ ಕ್ಷಮೆ ಕೇಳಲಿ

ಶಾಸಕ ಆರಗ ಜ್ಞಾನೇಂದ್ರ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 15:59 IST
Last Updated 5 ಜೂನ್ 2025, 15:59 IST
ಆರಗ ಜ್ಞಾನೇಂದ್ರ        
ಆರಗ ಜ್ಞಾನೇಂದ್ರ           

ಶಿವಮೊಗ್ಗ: ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣ ರಾಜ್ಯ ಸರ್ಕಾರದ ನೀಚತನದ ಪರಮಾವಧಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಜನರು ಹಾಗೂ ಕಾಲ್ತುಳಿತದಿಂದ ಸಾವಿಗೀಡಾದವರ ಕುಟುಂಬಗಳ ಕ್ಷಮೆ ಕೇಳಬೇಕು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು.

ನಾಡಿಗೆ ಒಬ್ಬ ಅಸಮರ್ಥ ಮಾರ್ಗದರ್ಶಕ ಇದ್ದರೆ ಏನಾಗುತ್ತದೆ ಎಂಬುದಕ್ಕೆ ಕಾಲ್ತುಳಿತ ಪ್ರಕರಣ ನಿದರ್ಶನ. ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ತಮ್ಮ ಸ್ಥಾನದ ಘನತೆ ಮರೆತು ವರ್ತಿಸಿದರು. ವಿಧಾನಸೌಧದ ಮುಂದೆ ಹಾಕಿದ್ದ ವೇದಿಕೆಯಲ್ಲೇ ಸಾವಿರ ಮಂದಿ ಇದ್ದರು. ಮಂತ್ರಿಗಳ ಮಕ್ಕಳು, ಮೊಮ್ಮಕ್ಕಳು, ಕುಟುಂಬದವರು, ಹಿರಿಯ ಪೊಲೀಸ್ ಅಧಿಕಾರಿಗಳು ಆಟಗಾರರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದದ್ದು ನಾಚಿಕೆಗೇಡು. ಅಷ್ಟಕ್ಕೂ ಅದು ದೇಶವನ್ನು ಪ್ರತಿನಿಧಿಸಿದ್ದ ತಂಡವಲ್ಲ. ವಾಣಿಜ್ಯ ಉದ್ದೇಶದ ತಂಡವನ್ನು ಕರೆತಂದು ವಿಧಾನಸೌಧದ ಎದುರು ಸತ್ಕರಿಸಲು ಸರ್ಕಾರ ಮುಂದಾಗಿದ್ದು ಏಕೆ ಎಂದು ಪ್ರಶ್ನಿಸಿದರು.

ADVERTISEMENT

ಜನರ ಭಾವನೆಗಳನ್ನು ರಾಜಕೀಯ ಲಾಭವಾಗಿ ಪರಿವರ್ತಿಸಿಕೊಳ್ಳಲು ಸರ್ಕಾರ ಮುಂದಾಗಿದ್ದೇ ಅಮಾಯಕರ ಸಾವಿಗೆ ಮುಖ್ಯ ಕಾರಣ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ಗೃಹ ಸಚಿವರು ಕಾಣೆಯಾಗಿದ್ದಾರೆ. ಆರ್‌ಸಿಬಿ ಸಂಭ್ರಮಾಚರಣೆಗೆ ಮುನ್ನ ಪೊಲೀಸರನ್ನು ಕರೆದು ಬಂದೋಬಸ್ತ್ ಬಗ್ಗೆ ಮಾಹಿತಿ ಪಡೆಯಲಾರದಷ್ಟು ಅವರು ದುರ್ಬಲರಾಗಿದ್ದಾರೆ ಎಂದು ಛೇಡಿಸಿದರು. 

ಅಧಿಕಾರ ಹಂಚಿಕೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯ ಚದುರಂಗದಾಟವೂ ಘಟನೆಯ ಹಿಂದಿರಬಹುದು ಎಂಬ ಅನುಮಾನ ಮೂಡಿದೆ. ಆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಪ್ರಶ್ನೆಯೊಂದಕ್ಕೆ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್, ಮಾಧ್ಯಮ ಸಮನ್ವಯಕಾರ ಕೆ.ವಿ.ಅಣ್ಣಪ್ಪ ಹಾಜರಿದ್ದರು.

’ಸರ್ಕಾರ ಶೋಕಿ ಮಾಡಲು ಹೋದ ಫಲ‘

ಅಂಧ್ರದಲ್ಲಿ ಸಿನಿಮಾದ ಪ್ರೀಮಿಯಂ ಶೋನಲ್ಲಿ ಕಾಲ್ತುಳಿತವಾಗಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಕ್ಕೆ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಇಲ್ಲಿ 11 ಜನರ ಸಾವಿನಲ್ಲಿ ಯಾರ ಲೋಪವಿದೆ? ಯಾರನ್ನು ಬಂಧನ ಮಾಡುತ್ತೀರಿ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಪ್ರಶ್ನೆ ಮಾಡಿದರು. ಕಾಲ್ತುಳಿತ ಪ್ರಕರಣದಲ್ಲಿ ಕೆಎಸ್‌ಸಿಎ ಹಾಗೂ ಆರ್‌ಸಿಬಿಯ ಲೋಪವೂ ಕಂಡುಬಂದಿದೆ. ಕೆಎಸ್‌ಸಿಎ ಮೇಲೆ ಈಗಾಗಲೇ ಎಫ್‌ಐಆರ್ ಮಾಡಲಾಗಿದೆ. ಆ ಬಗ್ಗೆ ಸಮಗ್ರ ತನಿಖೆ ನಡೆಸಿ ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಐಪಿಎಲ್‌ನಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದಿದ್ದಕ್ಕೆ ಸರ್ಕಾರ ಶೋಕಿ ಮಾಡಲು ಹೋಗಿದ್ದು ಹಾಸ್ಯಾಸ್ಪದ. ನೈತಿಕ ಹೊಣೆಹೊತ್ತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.