ಸಾಗರ: ‘ಯಾವುದೇ ಒಂದು ಭಾಷೆಯನ್ನು ಒಂದು ಧರ್ಮಕ್ಕೆ ಕಟ್ಟಿ ಹಾಕುವುದು ಆ ಭಾಷೆ ಹಾಗೂ ಧರ್ಮಕ್ಕೆ ಮಾಡುವ ಅವಮಾನವಾಗಿದೆ’ ಎಂದು ಲೇಖಕಿ ಡಾ.ಎಚ್.ಎಸ್. ಅನುಪಮಾ ಹೇಳಿದರು.
ಇಲ್ಲಿನ ಬ್ರಾಸಂ ಸಭಾಭವನದಲ್ಲಿ ಪರಸ್ಪರ ಸಾಹಿತ್ಯ ವೇದಿಕೆ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
‘ಯಾವುದೇ ಒಂದು ಧರ್ಮದ ಜನರಿಗೆ ಅದರ ಭಾಷೆ, ಉಡುಗೆ, ಆಹಾರ ಪದ್ಧತಿಯನ್ನು ಹೊರತುಪಡಿಸಿದ ಜೀವನ ಕ್ರಮವೂ ಇದೆ ಎಂಬ ತಿಳಿವಳಿಕೆ ನಮ್ಮದಾಗಬೇಕು’ ಎಂದರು.
ಸಂತ ಶಿಶುನಾಳ ಷರೀಫ ಪ್ರಶಸ್ತಿ ಸ್ವೀಕರಿಸಿದ ನಿವೃತ್ತ ಉಪನ್ಯಾಸಕ ಶಿವಮೊಗ್ಗ ಮುನೀರ್, ‘ಮುಕ್ತವಾಗಿ ಮಾತನಾಡುವ ವಾತಾವರಣ ಇಲ್ಲದೆ ಪ್ರತಿಭಟನೆಯ ಧ್ವನಿ ತಣ್ಣಗಾಗುತ್ತಿರುವುದು ಕಳವಳಕಾರಿ ಸಂಗತಿ. ನಮ್ಮ ನಡುವೆ ಅಘೋಷಿತ ತುರ್ತು ಪರಿಸ್ಥಿತಿ ಈಗ ನಿರ್ಮಾಣವಾಗಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ರೆ.ಎಫ್. ಕಿಟೆಲ್ ಪ್ರಶಸ್ತಿ ಸ್ವೀಕರಿಸಿದ ಲೇಖಕ ವಿಲಿಯಂ, ‘ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ ಪ್ರಮುಖವಾಗಿದೆ. ಕಿಟೆಲ್ ಅವರು ತಮ್ಮ ನಿಘಂಟಿನ ಮೂಲಕ ಸಾವಿರಾರು ಪದಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಅಂತಹವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಸಾರ್ಥಕ ಕಾರ್ಯ’ ಎಂದು ಹೇಳಿದರು. ಲೇಖಕ ಡಾ.ಜಿ.ಎಸ್. ಭಟ್ ಅಭಿನಂದನಾ ಭಾಷಣ ಮಾಡಿದರು. ನಾ. ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಅಧ್ಯಕ್ಷ ಡಾ.ಸರ್ಫ್ರಾಜ್ ಚಂದ್ರಗುತ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.