ಭದ್ರಾವತಿ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಆಚರಣೆಗೆ ಮುಸ್ಲಿಮರು ಸಕಲ ಸಿದ್ಧತೆಗಳಲ್ಲಿ ತೊಡಗಿದ್ದಾರೆ. ನಗರದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮೇಕೆ, ಕುರಿಗಳ ವ್ಯಾಪಾರ ಶುಕ್ರವಾರ ಭರದಿಂದ ನಡೆಯಿತು.
ಮಾರುಕಟ್ಟೆಯಲ್ಲಿ ₹ 16,000ದಿಂದ ₹ 2 ಲಕ್ಷವರೆಗೂ ಕುರಿಗಳು ಮಾರಾಟವಾಗಿದ್ದು, ಜವಾರಿ ಕುರಿಗಳಿಗೆ ಬೇಡಿಕೆ ಹೆಚ್ಚು ಇತ್ತು.
ಅಂಗಡಿಗಳಲ್ಲೂ ಮಟನ್ಗೆ ಬೇಡಿಕೆ: ನಿತ್ಯ ಮಟನ್ ವ್ಯಾಪಾರಕ್ಕೆ 4ರಿಂದ 7 ಆಡುಗಳನ್ನು ತರುತ್ತಿದ್ದೆವು. ಬಕ್ರೀದ್ ದಿನ 16ರಿಂದ 18 ಆಡುಗಳ ಮಟನ್ ಮಾರಾಟವಾಗುತ್ತದೆ. ಬಕ್ರೀದ್ ಆಸುಪಾಸು ವ್ಯಾಪಾರಕ್ಕೆ ಆಡುಗಳು ಸಿಗುವುದಿಲ್ಲ. ತಿಂಗಳು ಮುಂಚಿತವಾಗಿ ಆಡು–ಕುರಿಗಳನ್ನು ಖರೀದಿಸಿ ತಂದು ಸಾಕಿ, ಮಟನ್ ಮಾರಾಟ ಮಾಡುತ್ತೇವೆ ಎಂದು ವ್ಯಾಪಾರಿಗಳು ತಿಳಿಸಿದರು.
ಚನ್ನಗಿರಿ, ಹೊಸದುರ್ಗ, ಕೋಲಾರ, ಚಿತ್ರದುರ್ಗ, ತರೀಕೆರೆ, ಚಿಕ್ಕಮಗಳೂರು, ಮಂಡ್ಯ, ತುಮಕೂರು, ಬಳ್ಳಾರಿ, ಕಲಬುರಗಿ, ಬೀದರ್ ಅಲ್ಲದೇ ಪಕ್ಕದ ಆಂಧ್ರಪ್ರದೇಶದಿಂದಲೂ ಕುರಿ, ಆಡು, ಮೇಕೆ ಮರಿಗಳನ್ನು ತರಲಾಗುವುದು. ಮಾಂಸದ ಬೆಲೆ ಏರಿಕೆ ಮಾಡಿಲ್ಲ. ಎಂದಿನ ದರವನ್ನೇ ನಿಗದಿ ಮಾಡಲಾಗಿದೆ. ಶನಿವಾರ ನಸುಕಿನ 4 ಗಂಟೆಯಿಂದಲೇ ವ್ಯಾಪಾರ ಪ್ರಾರಂಭಿಸಲಾಗುವುದು ಎಂದು ಮಾಂಸದ ವ್ಯಾಪಾರಿ ರಮೇಶ್ ತಿಳಿಸಿದರು.
‘ತಾಲ್ಲೂಕಿನಾದ್ಯಂತ 57 ಮಸೀದಿಗಳಿವೆ. ಬಕ್ರೀದ್ ದಿನ ವಿಶೇಷ ಪ್ರಾರ್ಥನೆ ನಡೆಯುತ್ತದೆ. ಬಕ್ರೀದ್ ತ್ಯಾಗದ ದ್ಯೋತಕ. ಪವಿತ್ರ ಹಜ್ ಯಾತ್ರೆಯ ಅಂತ್ಯವನ್ನು ಸೂಚಿಸುತ್ತದೆ. ಹಂಚಿ ತಿನ್ನುವ ಸಂಪ್ರದಾಯ ಬಕ್ರೀದ್ನ ಆಚರಣೆಯಲ್ಲಿದೆ ಎಂದು ಚೌಕ್ ಮಸೀದಿಯ ಮೌಲಾನ ಜಾವೀದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.