ADVERTISEMENT

ನಗರಸಭೆ ಸದಸ್ಯರ ಹಕ್ಕನ್ನು ಕಿತ್ತುಕೊಳ್ಳುತ್ತಿರುವ ಬಿಜೆಪಿ:.ಲಲಿತಮ್ಮ ಆರೋಪ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 6:46 IST
Last Updated 4 ಫೆಬ್ರುವರಿ 2023, 6:46 IST
ಎನ್. ಲಲಿತಮ್ಮ
ಎನ್. ಲಲಿತಮ್ಮ   

ಸಾಗರ: ‘ಇಲ್ಲಿನ ನಗರಸಭೆಯಲ್ಲಿ ತಮಗೆ ಬಹುಮತ ಇದೆ ಎನ್ನುವ ಕಾರಣಕ್ಕೆ ಬಿಜೆಪಿ ಆಡಳಿತ ಪಕ್ಷ ವಿರೋಧ ಪಕ್ಷ
ವಾಗಿರುವ ಕಾಂಗ್ರೆಸ್ ಸದಸ್ಯರಿಗೆ ಸಭೆಯಲ್ಲಿ ತಮ್ಮ ಅಭಿಪ್ರಾಯವ್ಯಕ್ತಪಡಿಸಲು ಅವಕಾಶ ನೀಡದೆ ಅವರ ಹಕ್ಕು ‌ಕಿತ್ತುಕೊಳ್ಳುತ್ತಿದೆ’ ಎಂದು ನಗರಸಭೆ ಸದಸ್ಯೆ ಎನ್. ಲಲಿತಮ್ಮ ಆರೋಪಿಸಿದರು.

‘ಕಳೆದ ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಗಣೇಶ್ ಪ್ರಸಾದ್ ಅವರು ಇಲ್ಲಿನ ಇಂದಿರಾ ಕ್ಯಾಂಟೀನ್‌ನಲ್ಲಿ ನಡೆದಿರುವ ಅವ್ಯವಹಾರದ ಕುರಿತು ಪ್ರಸ್ತಾಪಿಸಿದ್ದು ಸ್ವಾಗತಾರ್ಹ. ಆದರೆ ಇಂದಿರಾ ಕ್ಯಾಂಟೀನ್ ನರೇಂದ್ರ ಮೋದಿಯವರ ಪರಿಕಲ್ಪನೆ ಎಂದು ಅವರು ಹೇಳಿದ್ದಕ್ಕೆ ನಾನು ವಿರೋಧ ವ್ಯಕ್ತಪಡಿಸಿದರೆ ಸಭೆಯಲ್ಲಿ ರಾದ್ದಾಂತ ಎಬ್ಬಿಸಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಒಡೆದು ಆಳುವ ನೀತಿ ಹೊಂದಿರುವ ಬಿಜೆಪಿಗೆ ವಿರೋಧ ಪಕ್ಷದವರ ಬಗ್ಗೆ ಯಾವುದೇ ಗೌರವವಿಲ್ಲ. ಇಂದಿರಾ ಕ್ಯಾಂಟೀನ್ ಗುತ್ತಿಗೆ ಅವ್ಯವಹಾರದ ಬಗ್ಗೆ ಗಣೇಶ್ ಪ್ರಸಾದ್ ಮಾತನಾಡುತ್ತಿದ್ದಾರೆ. ಆದರೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಊಟ, ಉಪಾಹಾರ ಪೂರೈಸುವ ಗುತ್ತಿಗೆಯಲ್ಲಿ ಅವರು ಅಕ್ರಮ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ಇಂದಿರಾ ಕ್ಯಾಂಟೀನ್ ಜೊತೆಗೆ ಈ ಗುತ್ತಿಗೆ ಕುರಿತು ಕೂಡ ತನಿಖೆಯಾಗಲಿ’ ಎಂದು ಒತ್ತಾಯಿಸಿದರು.

ADVERTISEMENT

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಸದಸ್ಯರಾದ ಸಬೀನಾ ತನ್ವೀರ್, ಶಾಹಿನಾ ಭಾನು ಇದ್ದರು.

‘ಧಾರ್ಮಿಕ ಭಾವನೆಗೆ ಧಕ್ಕೆ’: ಮಾರಿಕಾಂಬಾ ಜಾತ್ರೆಗೆ ಅಂಕೆ ಹಾಕಿದ ನಂತರ ಜಾತ್ರೆ ಮುಗಿಯುವವರೆಗೂ ಶುಭ ಕಾರ್ಯ ಮಾಡಬಾರದು ಎಂಬುದು ನಂಬಿಕೆ. ಆದರೆ ಬಿಜೆಪಿ ಕೆರೆ ಹಬ್ಬ ಆಯೋಜಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್. ಸುರೇಶ್ ಬಾಬು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.