ADVERTISEMENT

ಸೊರಬ| ಬಗರ್‌ಹುಕುಂ: ಅರ್ಹರಿಗೆ ಹಕ್ಕುಪತ್ರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 14:59 IST
Last Updated 26 ಅಕ್ಟೋಬರ್ 2020, 14:59 IST
ಸೊರಬದಲ್ಲಿ ಸೋಮವಾರ ಅನಾವರಣಗೊಂಡ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಪ್ರತಿಮೆ
ಸೊರಬದಲ್ಲಿ ಸೋಮವಾರ ಅನಾವರಣಗೊಂಡ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಪ್ರತಿಮೆ   

ಸೊರಬ: ‘ಪಟ್ಟಣದಲ್ಲಿ ಎಸ್.ಬಂಗಾರಪ್ಪ ಅವರ ಸ್ಮಾರಕ ನಿರ್ಮಾಣವಾಗಲಿ ಎಂಬುದು ಅಭಿಮಾನಿಗಳ ಕನಸಾಗಿತ್ತು. ಈ ದಿನ ಪ್ರತಿಮೆ ಅನಾವರಣದ ಮೂಲಕ ನನಸಾಗಿದೆ. ಹೆಚ್ಚಿನ ಅಭಿವೃದ್ಧಿಗೆ ಮುಖ್ಯಮಂತ್ರಿ ₹ 1 ಕೋಟಿ ಅನುದಾನ ಬಿಡುಗಡೆ ಮಾಡಿರುವುದು ಸಂತಸ ತಂದಿದೆ’ ಎಂದು ಶಾಸಕ ಕುಮಾರ್‌ ಬಂಗಾರಪ್ಪ ಹೇಳಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಸೋಮವಾರ ಮಾಜಿ ಮುಖ್ಯಮಂತ್ರಿ ದಿ. ಎಸ್.ಬಂಗಾರಪ್ಪ ಅವರ 87ನೇ ಜನ್ಮದಿನದ ಅಂಗವಾಗಿ ಅವರ ಪ್ರತಿಮೆ ಹಾಗೂ ಉದ್ಯಾನ ಅನಾವರಣದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನ ಅರ್ಹ ಬಗರ್‌ಹುಕುಂ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ. ಅರ್ಹತೆ ಇರುವವರಿಗೆ ಕಾನೂನಾತ್ಮಕವಾಗಿ ಹಕ್ಕುಪತ್ರ ನೀಡಲಾಗುವುದು. ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು, ಪುರಸಭೆಗೆ ಒಳಪಡುವ ಗ್ರಾಮದ ಜನರು ಆತಂಕಪಡಬೇಕಿಲ್ಲ. ತಾಲ್ಲೂಕಿನ ನೀರಾವರಿಗೆ ಒತ್ತು ನೀಡಲಾಗಿದ್ದು, ಶೇ 80ರಷ್ಟು ನೀರಾವರಿ ಗುರಿ ಹೊಂದಲಾಗಿದೆ. ದಂಡಾವತಿ ಎಡ-ಬಲ ದಂಡೆ ಯೋಜನೆಗೆ ಈಗಾಗಲೇ ಅನುಮತಿ ದೊರೆತಿದ್ದು, ಆ ಭಾಗ ಮುಳುಗಡೆಯಾಗದ ರೀತಿ ನೀರಾವರಿ ಯೋಜನೆಯನ್ನು ಶೀಘ್ರ ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಹೊಸನಗರದ ಮಾಜಿ ಶಾಸಕ ಸ್ವಾಮಿರಾವ್, ‘ಎಸ್.ಬಂಗಾರಪ್ಪ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ನನಗೆ ಅವರ ಸಂಗೀತ, ಸಾಹಿತ್ಯ, ಚಿಂತನೆ, ಜನಪರ ಯೋಚನೆ ವಿಶೇಷವಾಗಿ ಕಾಣುತ್ತಿದ್ದವು. ಅವರು ಜಾರಿಗೆ ತಂದ ಅಕ್ಷಯ, ಆರಾಧನ, ಗ್ರಾಮೀಣ ಕೃಪಾಂಕ, ರೈತರಿಗೆ ಉಚಿತ ವಿದ್ಯುತ್ ಸೇರಿ ರಾಜ್ಯದಲ್ಲಿ ದೊಡ್ಡ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದರು. 8 ಸಾವಿರಕ್ಕೂ ಹೆಚ್ಚು ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಅವರ ಬದುಕಿಗೆ ಆಶ್ರಯವಾಗಿದ್ದ ಅವರು ಹಿಂದುಳಿದ ವರ್ಗದ ನಾಯಕರಾಗಿ ಗುರುತಿಸಿಕೊಂಡಿದ್ದರು’ ಎಂದು ಸ್ಮರಿಸಿದ‌ರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಡಿ. ಉಮೇಶ್, ಉಪಾಧ್ಯಕ್ಷ ಮಧುರಾಯ್ ಜಿ.ಶೇಟ್, ಸದಸ್ಯರಾದ ಈರೇಶ್ ಮೇಸ್ತ್ರಿ, ನಟರಾಜ್ ಉಪ್ಪಿನ, ಪ್ರಭು, ಜಯಲಕ್ಷ್ಮಿ, ಪ್ರೇಮಾ, ಸುಲ್ತಾನಾ ಬೇಗಂ, ತಾಲ್ಲೂಕು ಪಂಚಾಯಿತಿ ಸದಸ್ಯ ಪುರುಷೋತ್ತಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಲಲಿತಾ ನಾರಾಯಣ್ ತಾಳಗುಪ್ಪ, ದೇವಕಿ ಪಾಣಿರಾಯಪ್ಪ, ಮುಖಂಡರಾದ ದೇವೇಂದ್ರಪ್ಪ, ಭೋಗೇಶ್ ಶಿಗ್ಗಾ, ಟಿ.ಆರ್.ಸುರೇಶ್, ಎ.ಎಸ್.ಹೇಮಚಂದ್ರ ಇದ್ದರು.

ಎಸ್.ಬಂಗಾರಪ್ಪ ಪ್ರತಿಮೆ ಸಿದ್ಧಪಡಿಸಿದ ಬಿಡದಿಯ ಅಶೋಕ್ ಗುಡಿಗಾರ್ ಸಾಗರ ಅವರನ್ನು ಸನ್ಮಾನಿಸಲಾಯಿತು.
ಎಸ್.ಬಂಗಾರಪ್ಪ ಅವರಿಗೆ ಪ್ರಿಯವಾಗಿದ್ದ ಡೊಳ್ಳು ಹಾಗೂ ಶಹನಾಯಿ ವಾದನ ನುಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.