ಶಿರಾಳಕೊಪ್ಪ: 40 ವರ್ಷದಿಂದ ರಾಜ್ಯದಲ್ಲಿ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷವು ಶಿಕಾರಿಪುರ ತಾಲ್ಲೂಕಿಗೆ ನೀಡಿರುವ ಕೊಡುಗೆ ಏನು ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಶ್ನಿಸಿದರು.
ಹತ್ತಿರದ ತಡಗಣಿ ಎಪಿಎಂಸಿ ಯಾರ್ಡ್ನಲ್ಲಿ ನೂತನವಾಗಿ ಪ್ರಾರಂಭಿಸಿರುವ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿ ಎಂದು ಬಿ.ಎಸ್.ಯಡಿಯೂರಪ್ಪ ಅವರು ನೀರಾವರಿ ಯೋಜನೆಯನ್ನು ಜಾರಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಪಂಪಸೆಟ್ಗಳನ್ನು ಹೊಂದಿರುವ ತಾಲ್ಲೂಕು ಶಿಕಾರಿಪುರ. 2014ರವರೆಗೆ 7,095 ಅಕ್ರಮ ಪಂಪಸೆಟ್ಗಳನ್ನು ಸಕ್ರಮ ಮಾಡಿದ್ದು, ಅದಕ್ಕಾಗಿ ₹107 ಕೋಟಿ ವೆಚ್ಚ ಮಾಡಲಾಗಿದೆ. 2014 ರಿಂದ 2018ರ ನಡುವೆ 1,700 ಪಂಪಸೆಟ್ಗಳನ್ನು ₹64 ಕೋಟಿ ವೆಚ್ಚದಲ್ಲಿ ಸಕ್ರಮಗೊಳಿಸಲಾಗುತ್ತಿದೆ. ಸರ್ಕಾರ ಶೀಘ್ರದಲ್ಲಿಯೇ ಟೆಂಡರ್ ಕರೆಯಲಿದೆ ಎಂದರು.
ತಾಳಗುಂದ, ಉಡುಗಣಿ, ಹೊಸೂರು ಹೋಬಳಿಯಲ್ಲಿ 114 ಕೆರೆ ಸಂಪೂರ್ಣ ತುಂಬಿದ್ದು, 38 ಕೆರೆಗಳು ಶೇ 50ರಷ್ಟು ತುಂಬಿವೆ. 28 ಕೆರೆಗಳಿಗೆ ಶೀಘ್ರದಲ್ಲಿಯೆ ನೀರು ಹರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಹೆಚ್.ಟಿ.ಬಳಿಗಾರ್, ಅರಣ್ಯ ನಿಗಮದ ಮಾಜಿ ಅಧ್ಯಕ್ಷ ಕೆ.ರೇವಣಪ್ಪ, ಭೋವಿ ನಿಗಮದ ಹನುಮಂತಪ್ಪ, ಟೌನ್ ಬಿಜೆಪಿ ಅಧ್ಯಕ್ಷ ಮಂಚಿ ಶಿವಣ್ಣ, ಪುರಸಭೆ ಮಾಜಿ ಅಧ್ಯಕ್ಷರಾದ ಚನ್ನವೀರ ಶೆಟ್ರು, ರಟ್ಟಿಹಳ್ಳಿ ಲೋಕೇಶ್, ಎಚ್.ಎಂ.ಚಂದ್ರಶೇಖರ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಪುರಸಭೆ ಮಾಜಿ ಸದಸ್ಯ ತಡಗಣಿ ಮಂಜಣ್ಣ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.