ADVERTISEMENT

ಪದೇ ಪದೇ ಸರ್ವರ್ ಡೌನ್, ಒಟಿಪಿ ಹೇಳಲು ಹಿಂದೇಟು

ಪರಿಶಿಷ್ಟ ಜಾತಿ ಒಳಮೀಸಲು ನಿಗದಿಗೆ ದತ್ತಾಂಶ ಸಂಗ್ರಹ: ಮನೆ ಮನೆ ಸಮೀಕ್ಷೆಗೆ ಹಿನ್ನಡೆ

ವೆಂಕಟೇಶ ಜಿ.ಎಚ್.
Published 11 ಮೇ 2025, 5:41 IST
Last Updated 11 ಮೇ 2025, 5:41 IST
ಶಿವಮೊಗ್ಗದ ವೀರಣ್ಣ ಲೇಔಟ್‌ನ ನಿವಾಸಿಯೊಬ್ಬರಿಂದ ಶನಿವಾರ ಗಣತಿದಾರರು ಮಾಹಿತಿ ಪಡೆದರು
ಶಿವಮೊಗ್ಗದ ವೀರಣ್ಣ ಲೇಔಟ್‌ನ ನಿವಾಸಿಯೊಬ್ಬರಿಂದ ಶನಿವಾರ ಗಣತಿದಾರರು ಮಾಹಿತಿ ಪಡೆದರು   

ಶಿವಮೊಗ್ಗ: ಪದೇಪದೇ ಮೊಬೈಲ್‌ಫೋನ್‌ ಆ್ಯಪ್‌ನ ಸರ್ವರ್ ಡೌನ್ ಆಗುವುದು ಹಾಗೂ ದತ್ತಾಂಶ ಸಂಗ್ರಹ ವೇಳೆ ಸಂಬಂಧಿಸಿದವರು ಆಧಾರ್‌ ಕಾರ್ಡ್‌ನ ಒಟಿಪಿ ಹೇಳಲು ಹಿಂದೇಟು ಹಾಕುತ್ತಿರುವುದು ಪರಿಶಿಷ್ಟ ಜಾತಿಯ ಒಳಮೀಸಲು ನಿಗದಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಮನೆಮನೆ ಸಮೀಕ್ಷೆ ವೇಳೆ ಗಣತಿದಾರರಿಗೆ ತಲೆನೋವಾಗಿದೆ.

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನಿಗದಿಗೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್‌ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯ ಬಗ್ಗೆ ದತ್ತಾಂಶ ಸಂಗ್ರಹಿಸಲು ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಮೇ 5ರಿಂದ ಮನೆಮನೆ ಸಮೀಕ್ಷೆ ಆರಂಭಿಸಿದೆ. ಅದು ಮೇ 17ಕ್ಕೆ ಮುಕ್ತಾಯವಾಗಬೇಕಿದೆ.

ದತ್ತಾಂಶ ಸಂಗ್ರಹಿಸಲು ಗಣತಿದಾರರಿಗೆ ಸರ್ಕಾರ ಮೊಬೈಲ್‌ ಫೋನ್‌ ಆ್ಯಪ್ ಒದಗಿಸಿದೆ. ತಾಂತ್ರಿಕ ತೊಂದರೆ ಎದುರಾದಲ್ಲಿ ಆಫ್‌ಲೈನ್‌ ಮೂಲಕ (ಲಿಖಿತವಾಗಿ ದಾಖಲು) ಸಂಬಂಧಿಸಿದವರ ಮಾಹಿತಿ ದಾಖಲು ಮಾಡಿಕೊಳ್ಳಬೇಕಿದೆ.

ADVERTISEMENT

ಸರ್ವರ್‌ ಡೌನ್ ಸಮಸ್ಯೆ: ಮೇ 5ರಿಂದ ಮನೆ ಮನೆ ಸಮೀಕ್ಷೆ ಆರಂಭವಾಗಿದ್ದರೂ ಮೊದಲ ದಿನ ಸಿದ್ಧತೆಯಲ್ಲಿಯೇ ಕಳೆದುಹೋಗಿದೆ. ವಾಸ್ತವವಾಗಿ ಮೇ 6ರಿಂದ ಸಮೀಕ್ಷೆ ಶುರುವಾಗಿದೆ. ಈ ಮಧ್ಯೆ ಸರ್ಕಾರ ಒದಗಿಸಿರುವ ಮೊಬೈಲ್‌ಫೋನ್ ಆ್ಯಪ್ ಸರ್ವರ್ ಸಮಸ್ಯೆಯಿಂದ ಕೆಲಸ ನಿಲ್ಲಿಸುತ್ತಿದೆ. ಮೇ 9ರಂದು ಇಡೀ ದಿನ ಆ್ಯಪ್ ಕಾರ್ಯ ನಿರ್ವಹಿಸಿಲ್ಲ. ಮೇ 10ರ ಮಧ್ಯಾಹ್ನದಿಂದ ಮತ್ತೆ ಚಾಲನೆಗೊಂಡಿದೆ. ಮೇ 17ರ ಡೆಡ್‌ಲೈನ್‌ನಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕಿದೆ. ಈ ತಾಂತ್ರಿಕ ಸಮಸ್ಯೆಯಿಂದ ಸಮೀಕ್ಷೆದಾರರು ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಜೊತೆಗೆ ಮಲೆನಾಡಿನಲ್ಲಿ ಈ ಬಾರಿಯ ವಿಪರೀತ ಬಿಸಿಲು ಅವರಿಗೆ ಸವಾಲಾಗಿದೆ.

ಸಮೀಕ್ಷೆ ವೇಳೆ ಸದರಿ ಮನೆಯಲ್ಲಿ ಪರಿಶಿಷ್ಟ ಜಾತಿಯವರ ಹೊರತಾಗಿ ಬೇರೆ ಸಮುದಾಯದವರು ಇದ್ದರೆ ಅವರ ಜಾತಿ, ಆ ಕುಟುಂಬದ ಸದಸ್ಯರ ಸಂಖ್ಯೆಯನ್ನು ಆ್ಯಪ್‌ನಲ್ಲಿ ನಮೂದಿಸಬೇಕಿದೆ. ಆದರೆ, ಇದಕ್ಕೆ ಬಹಳಷ್ಟು ಜನ ಅಸಹಕಾರ ತೋರುತ್ತಿದ್ದಾರೆ. ‘ಪರಿಶಿಷ್ಟ ಜಾತಿಯವರ ಸಮೀಕ್ಷೆ ನಡೆಯುತ್ತಿದೆ. ಅವರ ಮಾಹಿತಿ ಅಷ್ಟೇ ಸಂಗ್ರಹಿಸಿ. ನಮ್ಮ ವಿವರ ಏಕೆ ಕೊಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ’ ಎಂಬುದು ಸಿಬ್ಬಂದಿಯ ಅಳಲು.

ಸಮೀಕ್ಷೆ ವೇಳೆ ಪರಿಶಿಷ್ಟ ಜಾತಿಯವರ ಆಧಾರ್‌ಕಾರ್ಡ್, ರೇಷನ್‌ ಕಾರ್ಡ್ ಇಲ್ಲವೇ ಜಾತಿ ಪ್ರಮಾಣಪತ್ರ ಪಡೆದು ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಆಧಾರ್‌ ಕಾರ್ಡ್‌ನ ವಿವರ ಪಡೆಯಲು ಒಟಿಪಿ ಕೇಳಿದರೆ ಸಿಬ್ಬಂದಿಯನ್ನು ಅನುಮಾನಿಸಲಾಗುತ್ತಿದೆ. ವಿವರ ದಾಖಲಿಸಿಕೊಳ್ಳದಿದ್ದರೂ ಚಿಂತೆ ಇಲ್ಲ. ಆಧಾರ್‌ ಕಾರ್ಡ್‌ನ ಒಟಿಪಿ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಎಪಿಎಲ್‌ ಕಾರ್ಡ್‌ ಹೊಂದಿರುವವರು ಕಾಲಕಾಲಕ್ಕೆ ಅದನ್ನು ನವೀಕರಿಸಿಕೊಂಡಿಲ್ಲ. ಇದು ಕೂಡ ದತ್ತಾಂಶ ಸಂಗ್ರಹಕ್ಕೆ ಸಮಸ್ಯೆ ಆಗಿದೆ ಎಂದು ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ನೆಟ್‌ವರ್ಕ್ ಸಮಸ್ಯೆ; ಸಮೀಕ್ಷೆ ಕಾರ್ಯಕ್ಕೆ ಹಿನ್ನಡೆ

ಮಲೆನಾಡಿನಲ್ಲಿ ಅದೂ ಅರಣ್ಯದಂಚಿನ ಪ್ರದೇಶಗಳಲ್ಲಿ ಬಹಳಷ್ಟು ಕಡೆ ಮೊಬೈಲ್‌ಫೋನ್ ನೆಟ್‌ವರ್ಕ್ ಸಮಸ್ಯೆ ಇದೆ. ಅಲ್ಲೆಲ್ಲ ಆ್ಯಪ್‌ ಕಾರ್ಯ ನಿರ್ವಹಿಸುವುದಿಲ್ಲ. ಲಿಖಿತವಾಗಿಯೇ ದತ್ತಾಂಶ ಸಂಗ್ರಹಿಸಬೇಕಿದೆ. ಹೀಗಾಗಿ ನಿಗದಿತ ಕಾಲಮಿತಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸುವುದು ಕಷ್ಟ. ಸರ್ಕಾರ ಅವಧಿ ವಿಸ್ತರಣೆ ಮಾಡಬೇಕಿದೆ ಎಂದು ಸಮೀಕ್ಷೆ ಕಾರ್ಯದಲ್ಲಿ ಸಕ್ರಿಯರಾದ ಅಧಿಕಾರಿಯೊಬ್ಬರು ಹೇಳುತ್ತಾರೆ. ಒಟಿಪಿ ಹೇಳಲು ಅನುಮಾನಿಸುವಂತಹ ಪ್ರವೃತ್ತಿ ದೂರ ಮಾಡಲು ಹಾಗೂ ಪರಿಶಿಷ್ಟ ಜಾತಿಯ ಹೊರತಾದವರು ಮಾಹಿತಿ ನೀಡಲು ಅಸಹಕಾರ ತೋರುವುದು ತಪ್ಪಿಸಲು ಸಮೀಕ್ಷೆ ಕಾರ್ಯದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.