ADVERTISEMENT

ಶಿವಮೊಗ್ಗ | ಕೋವಿಡ್‌ ರೋಗಿ ನಾಪತ್ತೆ: ಠಾಣೆ ಮೆಟ್ಟಿಲೇರಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 21:15 IST
Last Updated 31 ಜುಲೈ 2020, 21:15 IST

ಶಿವಮೊಗ್ಗ: ಶಿಕಾರಿಪುರದ ವಿನಾಯಕ ನಗರದ 85 ವರ್ಷದ ಕೋವಿಡ್‌ ರೋಗಿ ನಾಪತ್ತೆ ಪ್ರಕರಣ ಗೊಂದಲ ಮೂಡಿಸಿದ್ದು, ಕುಟುಂಬದ ಸದಸ್ಯರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.

ಮಹಾದೇವಪ್ಪ ಅವರಿಗೆ ಜುಲೈ 18ರಂದು ಉಸಿರಾಟದ ತೊಂದರೆ ಕಾಣಿಸಿದ್ದು, ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಗಂಟಲು ದ್ರವ ಪರೀಕ್ಷೆಯ ವರದಿಯಲ್ಲಿ ಸೋಂಕು ಇರುವುದು ಜುಲೈ 23ರಂದು ದೃಢಪಟ್ಟಿದೆ. ತಕ್ಷಣ ಅವರನ್ನು ಆಂಬು
ಲೆನ್ಸ್ ಮೂಲಕ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ.

ಅವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಕುಟುಂಬದ ಸದಸ್ಯರಿಗೆ ಮೂರು ದಿನಗಳ ಹಿಂದೆ ಮಾಹಿತಿ ನೀಡಿದ್ದಾರೆ. ಮಾಹಿತಿಗೆ ಕುಟುಂಬಸ್ಥರು ಪಟ್ಟುಹಿಡಿದಾಗ ಅವರನ್ನು ಯಾವ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸ
ಲಾಗಿದೆ ಎಂಬ ಮಾಹಿತಿಯೇ ಸಿಕ್ಕಿಲ್ಲ. ಬದುಕಿದ್ದಾರೋ, ಮೃತಪಟ್ಟಿದ್ದಾರೋ ಎಂಬುದೂ ಗೊತ್ತಾಗಿಲ್ಲ.

ADVERTISEMENT

‘ಮೃತಪಟ್ಟಿದ್ದಾರೆ ಎಂದು ತಾಲ್ಲೂಕು ವೈದ್ಯರು ಹೇಳಿಕೆ ನೀಡಿದರೆ, ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳುತ್ತಿದ್ದಾರೆ. ಅವರನ್ನು ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಕರೆದುಕೊಂಡು ಹೋದ ದಾಖಲೆಗಳು ಇವೆ. ಆಮೇಲಿನ ಯಾವ ಮಾಹಿತಿಯೂ ಇಲ್ಲ. ಹಾಗಾಗಿ, ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಅವರ ಪುತ್ರ ಪರಮೇಶ್ವರಪ್ಪ ವಿವರ ನೀಡಿದರು.

‘ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತನಿಖೆ ನಂತರ ಮಾಹಿತಿ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.