ತೀರ್ಥಹಳ್ಳಿ: ಸಾಂಪ್ರದಾಯಿಕ ಶ್ರೀರಾಮೇಶ್ವರ ದೇವರ ದಸರಾ ಉತ್ಸವದ ಅಂಗವಾಗಿ ₹ 8.5 ಲಕ್ಷ ವೆಚ್ಚದಲ್ಲಿ ಕುಶಾವತಿಯ ನೆಹರೂ ಉದ್ಯಾನದಲ್ಲಿ ಮೂರು ದಿನ ಸಾಂಸ್ಕೃತಿಕ ದಸರಾ ಕಾರ್ಯಕ್ರಮ ನಡೆಯಲಿದೆ ಎಂದು ದಸರಾ ಉತ್ಸವ ಸಮಿತಿ ಮುಖ್ಯ ಸಂಚಾಲಕ ಸಂದೇಶ್ ಜವಳಿ ತಿಳಿಸಿದರು.
ಸೋಮವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ವಿಜಯದಶಮಿಯಂದು ಮಧ್ಯಾಹ್ನ2.30ಕ್ಕೆ ರಥಬೀದಿಯಿಂದ ಚಾಮುಂಡೇಶ್ವರಿ ದೇವಿಯ ಅಂಬಾರಿ, ರಾಮೇಶ್ವರ ಪಲ್ಲಕ್ಕಿ ಉತ್ಸವ, ಸ್ತಬ್ಧಚಿತ್ರ, ಜಾನಪದ ತಂಡಗಳ ಆಕರ್ಷಕ ಮೆರವಣಿಗೆ ನಡೆಯಲಿದೆಎಂದರು.
ಸಾಂಸ್ಕೃತಿಕ ದಸರಾಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ಚಾಲನೆ ನೀಡಲಿದ್ದಾರೆ. ಅ. 14ರಂದು ಸಂಜೆ ಶಿವಮೊಗ್ಗದ ಸುರೇಖಾ ಹೆಗಡೆ ಅವರಿಂದ ಸುಗಮ ಸಂಗೀತ ಏರ್ಪಡಿಸಲಾಗಿದೆ. ಬಳಿಕ ಸ್ಥಳೀಯರಿಂದ ಸಾಂಸ್ಕೃತಿಕ ಕಲರವ, ಅ.15ರಂದು ದಸರಾ ಉತ್ಸವ, ಸಂಜೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ನೃತ್ಯ ನಿಕೇತನ ಕೊಡವೂರು ಅವರಿಂದ ನಾರಸಿಂಹ ನೃತ್ಯ ರೂಪಕ ನಡೆಯಲಿದೆ.ಅನವಶ್ಯಕ ವೆಚ್ಚಕ್ಕೆ ಕಡಿವಾಣ ಹಾಕಿ ಕಾರ್ಯಕ್ರಮ ಆಯೋಜಿಸಲಾಗಿದೆ. ದಸರಾ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಹುಲಿ ವೇಷಧಾರಿಗಳಿಗೆ ₹ 2 ಸಾವಿರ ಗೌರವಧನ ನೀಡಲಾಗುವುದು ಎಂದು ತಿಳಿಸಿದರು.
ದಸರಾ ಆಚರಣ ಸಮಿತಿ ಪ್ರಮುಖರಾದ ಸೊಪ್ಪುಗುಡ್ಡೆ ರಾಘವೇಂದ್ರ, ವಿಧಾತ ಅನಿಲ್, ಡಾನ್ ರಾಮಣ್ಣ, ಸಿರಿಬೈಲು ಧರ್ಮೇಶ್, ಬಿ. ಗಣಪತಿ, ಚಂದವಳ್ಳಿ ಸೋಮಶೇಖರ್, ಪ್ರಶಾಂತ್ ಕುಕ್ಕೆ, ವೆಂಕಟೇಶ್ ಪಡವರ್ಧನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಗೀತಾ ರಮೇಶ್, ರತ್ನಾಕರ್ ಶೆಟ್ಟಿ, ಸುಶೀಲ ಶೆಟ್ಟಿ, ಜ್ಯೊತಿ ಮೋಹನ್, ಜ್ಯೋತಿ ಗಣೇಶ್, ರಹಮತ್ ಉಲ್ಲಾ ಅಸಾದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.