ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಸೇರಿದಂತೆ ಏಳು ನಿರ್ದೇಶಕರನ್ನು ಅನರ್ಹಗೊಳಿಸಿ 2016ರಲ್ಲಿ ಆದೇಶ ನೀಡಿದ್ದ ಸಹಕಾರ ಇಲಾಖೆ ಜಂಟಿ ನಿಬಂಧಕರ ಆದೇಶಕ್ಕೆ ಗುರುವಾರ ಹೆಚ್ಚುವರಿ ನಿಬಂಧಕರು ತಡೆಯಾಜ್ಞೆ ನೀಡಿದ್ದಾರೆ.
ಹೆಚ್ಚುವರಿ ನಿಬಂಧಕರ ತಡೆಯಾಜ್ಞೆಯಿಂದಾಗಿ ಅಧಿಕಾರ ಕಳೆದುಕೊಳ್ಳಲಿದ್ದ ಅಧ್ಯಕ್ಷ, ನಿರ್ದೇಶಕರಿಗೆ ಮತ್ತೆ ಅಧಿಕಾರದಲ್ಲಿ ಮುಂದುವರಿಯುವ ಅವಕಾಶ ಲಭಿಸಿದೆ.
ಬ್ಯಾಂಕ್ನ ಗಾಂಧಿ ಬಜಾರ್ ಶಾಖೆಯಲ್ಲಿ 2014ರಲ್ಲಿ ನಡೆದಿದ್ದ ₹ 62.77 ಕೋಟಿ ನಕಲಿ ಬಂಗಾರ ಅಡಮಾನ ಸಾಲದ ಹಗರಣದ ಸಮಯದಲ್ಲಿ ಇದ್ದ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹಾಗೂ 7 ನಿರ್ದೇಶಕರ ವಿರುದ್ಧ ವಿಚಾರಣೆ ನಡೆಸಿದ್ದ ಸಹಕಾರ ಇಲಾಖೆ ಜಂಟಿ ನಿಬಂಧಕರು, ಅವರನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿ 2016ರಲ್ಲಿ ಆದೇಶ ಹೊರಡಿಸಿದ್ದರು.
ಜಂಟಿ ನಿಬಂಧಕರ ಆದೇಶದ ವಿರುದ್ಧ ಎಲ್ಲ ನಿರ್ದೇಶಕರೂ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೇ ನ.17 ರಂದು ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿತ್ತು. ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತ್ತು. ಅನರ್ಹತೆ ಒಳಗಾಗಿದ್ದ ಈಗಿನ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ನಿರ್ದೇಶಕರಾದ ಜೆ.ಪಿ.ಯೋಗೇಶ್, ಕೆ.ಪಿ.ದುಗ್ಗಪ್ಪಗೌಡ, ಶ್ರೀಪಾದರಾವ್, ಎಂ.ಎಂ.ಪರಮೇಶ್, ವಿಜಯದೇವ್ ಮತ್ತು ಅಗಡಿ ಅಶೋಕ್ ಅವರು ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರಿಗೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನಿಬಂಧಕರು 2016ರಲ್ಲಿ ಜಂಟಿ ನಿಬಂಧಕರು ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಇದರಿಂದಾಗಿ ಅನರ್ಹತೆ ಭೀತಿ ಎದುರಿಸುತ್ತಿದ್ದ ಎಲ್ಲ ನಿರ್ದೇಶಕರು ಸದ್ಯಕ್ಕೆ ನಿರಾಳರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.