ADVERTISEMENT

ಕೋರಂ ಇಲ್ಲದೆ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಚುನಾವಣೆ ಮುಂದೂಡಿಕೆ

ಅಧ್ಯಕ್ಷ ಸ್ಥಾನ ಪಡೆಯುವ ಬಿಜೆಪಿ ಯತ್ನಕ್ಕೆ ಹಿನ್ನಡೆ, ಒಗ್ಗಟ್ಟು ಪ್ರದರ್ಶಿಸಿದ ಕಾಂಗ್ರೆಸ್, ಜೆಡಿಎಸ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 20:16 IST
Last Updated 9 ನವೆಂಬರ್ 2020, 20:16 IST
ಶಿವಮೊಗ್ಗ ಡಿಸಿಸಿ ಬ್ಯಾಂಕ್
ಶಿವಮೊಗ್ಗ ಡಿಸಿಸಿ ಬ್ಯಾಂಕ್   

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಿಗದಿಯಾಗಿದ್ದ ಚುನಾವಣೆಯನ್ನು ಕೋರಂ ಕೊರತೆಯ ಕಾರಣ ಒಂದು ವಾರ ಮುಂದೂಡಲಾಯಿತು.

ಬ್ಯಾಂಕ್‌ ಅಧ್ಯಕ್ಷರಾಗಿದ್ದ ಆರ್.ಎಂ.ಮಂಜುನಾಥ ಗೌಡರ ಸಹಕಾರ ಸಂಘಗಳ ಪ್ರಾಥಮಿಕ ಸದಸ್ಯತ್ವ ರದ್ದು ಮಾಡಿ ಈಚೆಗೆ ಸಹಕಾರ ಸಂಘಗಳ ಜಂಟಿ ನಿಬಂಧಕರು ಆದೇಶ ಹೊರಡಿಸಿದ್ದರು. ಇದರಿಂದ ಮಂಜುನಾಥ ಗೌಡರು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ, ಅಧ್ಯಕ್ಷ ಸ್ಥಾನವನ್ನೂ ಕಳೆದುಕೊಳ್ಳುವಂತಾಗಿತ್ತು.

ತೆರವಾದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. 14 ಸದಸ್ಯ ಬಲದ ಆಡಳಿತ ಮಂಡಳಿಯಲ್ಲಿಕೋರಂಗಾಗಿ ಕನಿಷ್ಠ 8 ಜನರು ಹಾಜರಾಗಬೇಕಿತ್ತು. ಹಾಜರಾಗಿದ್ದು ಕೇವಲ 6 ನಿರ್ದೇಶಕರು. ಹಾಗಾಗಿ, ನಾಮಪತ್ರ ಸಲ್ಲಿಕೆಯ ಅವಧಿ ಮುಗಿಯುತ್ತಿದ್ದಂತೆ ಚುನಾವಣಾಧಿಕಾರಿ ನಾಗೇಂದ್ರ ಬಿ.ಹೊನ್ನಳ್ಳಿ ಚುನಾವಣೆ ಮುಂದೂಡುವ ನಿರ್ಧಾರ ಪ್ರಕಟಿಸಿದರು.

ADVERTISEMENT

ಅಧ್ಯಕ್ಷ ಸ್ಥಾನಕ್ಕೆ ಎಚ್‌.ಎಲ್‌.ಷಡಾಕ್ಷರಿ, ಪ್ರಭಾರ ಅಧ್ಯಕ್ಷ ಚನ್ನವೀರಪ್ಪ ಹಾಗೂ ಯೋಗೀಶ್ ನಾಮಪತ್ರ ಸಲ್ಲಿಸಿದ್ದರು.

ಜುಲೈನಲ್ಲಿ ಚುನಾವಣೆಯೇ ರದ್ದಾಗಿತ್ತು:ಜುಲೈ ತಿಂಗಳಲ್ಲೇ ಸಹಕಾರ ಇಲಾಖೆಯ ಜಂಟಿ ನಿರ್ದೇಶಕರು ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ್ದರು. ತೆರವಾದ ಸ್ಥಾನಕ್ಕೆ ಜುಲೈ 31ರಂದು ಚುನಾವಣೆ ನಿಗದಿಯಾಗಿತ್ತು.

ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ ಆದೇಶ ಪ್ರಶ್ನಿಸಿ ಮಂಜುನಾಥಗೌಡ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಕೋರ್ಟ್‌ ಜಂಟಿ ನಿರ್ದೇಶಕರ ಆದೇಶ, ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆಗೂ ತಡೆ ನೀಡಿತ್ತು. ಮಂಜುನಾಥಗೌಡ ಅವರು ಅಧ್ಯಕ್ಷರಾಗಿ ಮತ್ತೆ ಅಧಿಕಾರ ಸ್ವೀಕರಿಸಿದ್ದರು.

ಕೋರ್ಟ್‌ ತಡೆಯಾಜ್ಞೆ ಬಳಿಕ ಸರ್ಕಾರ ಜಂಟಿ ನಿಬಂಧಕರ ಆದೇಶ ರದ್ದು ಮಾಡಿ, ಪ್ರಕರಣದ ವಿಚಾರಣೆ ನಡೆಸಲು ಚಿತ್ರದುರ್ಗ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿತ್ತು. ತನಿಖೆಗೆ ನಿಯೋಜಿತರಾಗಿದ್ದ ಜಂಟಿ ನಿಬಂಧಕರು ಮಂಜುನಾಥ ಗೌಡರ ನಿರ್ದೇಶಕ ಸ್ಥಾನ ರದ್ದುಗೊಳಿಸಿ ಮತ್ತೆ ಆದೇಶ ಹೊರಡಿಸಿದ್ದರು. ಐದು ವರ್ಷ ಯಾವುದೇ ಸಹಕಾರ ಸಂಘದ ಸದಸ್ಯತ್ವ ಪಡೆಯದಂತೆ ಮತ್ತೆ ಆದೇಶ ಹೊರಡಿಸಲಾಗಿತ್ತು.

ಗೌಡರ ಬೆನ್ನು ಬಿಡದ ಗಾಂಧಿ ಬಜಾರ್ ಶಾಖೆ ಹಗರಣ:ಬ್ಯಾಂಕ್‌ನ ಗಾಂಧಿ ಬಜಾರ್ ಶಾಖೆಯಲ್ಲಿ 2014ರಲ್ಲಿ ನಡೆದಿದ್ದ ₹ 62.77 ಕೋಟಿ ಮೊತ್ತದ ಬಂಗಾರ ಅಡಮಾನ ಸಾಲ ಹಗರಣದ ಸಂಬಂಧ ತನಿಖೆಗೆ ಸಹಕರಿಸಲು ಮಂಜುನಾಥಗೌಡರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಈ ಹಿಂದೆ ಸಿಐಡಿ ಹಗರಣದ ತನಿಖೆ ನಡೆಸಿತ್ತು. ‘ಹಣಕಾಸಿನ ವ್ಯವಹಾರ ಅಧಿಕಾರಿಗಳ ಜವಾಬ್ದಾರಿ. ಆಡಳಿತ ಮಂಡಳಿ ಇದಕ್ಕೆ ಹೊಣೆಯಲ್ಲ. ಅಂದು ಅಧ್ಯಕ್ಷರಾಗಿದ್ದ ಗೌಡರ ಪಾತ್ರ ಇಲ್ಲ’ ಎಂದು ಆರೋಪದಿಂದ ಸಿಐಡಿ ಮುಕ್ತಗೊಳಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಗರಣಕ್ಕೆ ಮತ್ತೆ ಮರುಜೀವ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.