ಬೆಂಗಳೂರು: ಹುಣಸೋಡು ಸ್ಫೋಟದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಕಲ್ಲು ಗಣಿಗಳ ಪುನರರಾಂಭಕ್ಕೆ ಅನುಮತಿ ನೀಡುವಂತೆ ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಕಲ್ಲು ಗಣಿ ಮಾಲೀಕರ ಸಂಘದ ಪ್ರತಿನಿಧಿಗಳು ಗಣಿ ಸಚಿವ ಮುರುಗೇಶ್ ಆರ್.ನಿರಾಣಿಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈಶ್ವರಪ್ಪ ನೇತೃತ್ವದಲ್ಲಿ ನಿಯೋಗದಲ್ಲಿ ತೆರಳಿ ನಿರಾಣಿ ಅವರನ್ನು ಭೇಟಿಮಾಡಿದ ಕಲ್ಲು ಗಣಿಗಳ ಮಾಲೀಕರು, ಹುಣಸೋಡು ಸ್ಫೋಟದ ಬಳಿಕ ಎಲ್ಲ ಕಲ್ಲು ಗಣಿಗಳನ್ನೂ ಸ್ಥಗಿತಗೊಳಿಸಿ ರುವುದರಿಂದ ಉಂಟಾಗಿರುವ ಸಮಸ್ಯೆಯನ್ನು ವಿವರಿಸಿದರು. ಜಿಲ್ಲೆಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಿಗೆ ಕಲ್ಲು, ಜೆಲ್ಲಿಯ ಕೊರತೆ ಉಂಟಾಗಿದ್ದು, ಕಲ್ಲು ಗಣಿಗಳ ಮಾಲೀಕರಿಗೂ ಆರ್ಥಿಕ ನಷ್ಟವಾಗುತ್ತಿದೆ. ಈ ಅಂಶಗಳನ್ನು ಪರಿಶೀಲಿಸಿಪರವಾನಗಿಯ ಷರತ್ತುಗಳನ್ನು ಪಾಲಿಸಿ, ನಡೆಯುತ್ತಿದ್ದ ಎಲ್ಲ ಕಲ್ಲು ಗಣಿಗಳ ಪುನರಾರಂಭಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಜ. 21ರಂದು ರಾತ್ರಿ ಶಿವಮೊಗ್ಗ ಸಮೀಪದ ಹುಣಸೋಡು ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ತುಂಬಿದ್ದ ಲಾರಿ ಸ್ಫೋಟಗೊಂಡು ಆರು ಮಂದಿ ಮೃತಪಟ್ಟಿದ್ದರು. ಮೂವರು ನಾಪತ್ತೆಯಾಗಿದ್ದರು. ಆ ಬಳಿಕ ಜಿಲ್ಲೆಯಲ್ಲಿರುವ ಎಲ್ಲ ಕ್ವಾರಿಗಳನ್ನೂ ಸ್ಥಗಿತಗೊಳಿಸಲಾಗಿತ್ತು.
ಕಲ್ಲು ಗಣಿ ಮಾಲೀಕರ ಸಂಘದ ನಿಯೋಗದ ಭೇಟಿ ವೇಳೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಮೋಹನ್ ಲಿಂಬೆಕಾಯಿ ಮತ್ತು ಗಣಿ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.