ಶಿವಮೊಗ್ಗ: ಕೋಟೆ ದೇವಾಲಯ ಆವರಣದ ಮಾರಿಗದ್ದುಗೆಯಲ್ಲಿ ಪ್ರತಿಷ್ಠಾಪಿಸಿರುವ ಮಾರಿಕಾಂಬಾ ದೇವಿಯ ದರ್ಶನವನ್ನು ಬುಧವಾರ ಸಹಸ್ರಾರು ಭಕ್ತರು ಪಡೆದರು.
ಗಾಂಧಿ ಬಜಾರಿನಲ್ಲಿ ಪ್ರತಿಷ್ಠಾಪಿಸಿದ್ದ ಮಾರಿಕಾಂಬೆಯನ್ನು ಭವ್ಯ ಮೆರವಣಿಗೆಯೊಂದಿಗೆ ಮಂಗಳವಾರ ರಾತ್ರಿ ಮಾರಿ ಗದ್ದುಗೆಯಲ್ಲಿ ತಂದು ಪ್ರತ್ರಿಷ್ಠಾಪಿಸಲಾಗಿದೆ. ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜಾತ್ರೆಯ ಎರಡನೇ ದಿನವಾದ ಬುಧವಾರ ಬೆಳಿಗ್ಗೆ 4 ಗಂಟೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕೋಟೆ ರಸ್ತೆಯ ವಾಸವಿ ಶಾಲೆಯವರೆಗೂ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಕುಟುಂಬದ ಸದಸ್ಯರು, ಮಕ್ಕಳು ಬೇವಿನ ಉಡಿಗೆತೊಟ್ಟು ದೇವಿಯ ದರ್ಶನ ಪಡೆದರು.
ದೇವಾಲಯದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನ ಪೂಜೆಗಳು ನಡೆದವು. ಜಾತ್ರೆಯಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯದ ಸುತ್ತ ಆಟಿಕೆ ಸಾಮಗ್ರಿ, ತಿಂಡಿ–ತಿನಿಸುಗಳ ಅಂಗಡಿಗಳು, ಪರ ಊರುಗಳಿಂದಲೂ ಬಂಧುಗಳುಬಂದಿದ್ದರಿಂದ ಹಬ್ಬಕ್ಕೆ ಮತ್ತಷ್ಟು ಕಳೆ ಬಂದಿತ್ತು. ಅನೇಕ ಬಡಾವಣೆ, ಬೀದಿಗಳ ತಮ್ಮ ತಮ್ಮ ಮನೆಗಳ ಮುಂದೆ ಶಾಮಿಯಾನ ಹಾಕಿಕೊಂಡು ಹಬ್ಬದ ಅಡುಗೆ ತಯಾರಿಸಿ, ಊಟ ಸವಿದರು.
ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಸಂಚಾರ ಶೌಚಾಲಯ, ಬೇವಿನ ಉಡುಗೆ ಧರಿಸಿದ್ದವರಿಗೆ ಸ್ನಾನದ ವ್ಯವಸ್ಥೆ, ಭಕ್ತರಿಗೆ ಪಾನಕ, ಮಜ್ಜಿಗೆ, ಪ್ರಸಾದದ ವ್ಯವಸ್ಥೆಯನ್ನು ದೇವಸ್ಥಾನ ಸಮಿತಿಯಿಂದ ಮಾಡಲಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.
ಹೆಲಿಟೂರಿಸಂ: ಮಾರಿಕಾಂಬಾ ಜಾತ್ರೆ ಪ್ರಯುಕ್ತ ಕೇರಳದ ತುಂಬೆ ಹೆಲಿ ಸಂಸ್ಥೆ ವತಿಯಿಂದ ಮಂಗಳವಾರದಿಂದಹೆಲಿ ಟೂರ್ ಆರಂಭಗೊಂಡಿದೆ. ಒಂದು ಬಾರಿ 6 ಜನರನ್ನು ಕರೆದೊಯ್ಯುವ ಹೆಲಿಕಾಪ್ಟರ್ ಒಮ್ಮೆ ಗಗನಕ್ಕೆ ಹಾರಿದರೆ 10 ನಿಮಿಷ ಪ್ರಯಾಣಿಕರನ್ನು ಸುತ್ತಿಸಿಕೊಂಡು ಹೆಲಿಪ್ಯಾಡ್ ಬಳಿ ತಂದು ಬಿಡುತ್ತದೆ.ಪ್ರಯಾಣ ದರ ಒಬ್ಬರಿಗೆ ₹ 3 ಸಾವಿರ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.