ಶಿವಮೊಗ್ಗ: ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಅಂಗವಾಗಿ ಶಿವಮೊಗ್ಗ ರಂಗಾಯಣ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸೆ. 18 ಮತ್ತು 19ರಂದು ನಾಟಕೋತ್ಸವ ಹಮ್ಮಿಕೊಂಡಿದೆ.
18ರಂದು ಸಂಜೆ 6.30ಕ್ಕೆ ಉಮಾಶಂಕರ್ ನಿರ್ದೇಶನದ ‘ಸಾಯುವನೇ ಚಿರಂಜೀವಿ’ ಏಕವ್ಯಕ್ತಿ ನಾಟಕದ 118ನೇ ಪ್ರದರ್ಶನವನ್ನು ಕೃಷ್ಣಮೂರ್ತಿ ಕವತ್ತಾರ್ ನೀಡಲಿದ್ದಾರೆ. 19ರಂದು ಸಂಜೆ 6ಕ್ಕೆ ಬಿ.ವಿ.ಕಾರಂತರ ಜನ್ಮದಿನದ ಅಂಗವಾಗಿ ಧಾರವಾಡದ ಬಸವಲಿಂಗಯ್ಯ ಹಿರೇಮಠ ಮತ್ತು ಕಲಾವಿದರಿಂದ ‘ರಂಗಸಂಗೀತ’ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 7ಕ್ಕೆ ಕವತ್ತಾರ್ ನಿರ್ದೇಶನದ ರಂಗಾಯಣದ ಹೊಸ ರಂಗಪ್ರಯೋಗ ‘ಹತ್ಯಾಕಾಂಡ– ವಿದುರಾಶ್ವತ್ಥದ ವೀರಗಾಥೆ’ ನಾಟಕ ಪ್ರದರ್ಶನ
ಇರುತ್ತದೆ ಎಂದು ರಂಗಾಯಣದ ನಿರ್ದೇಶಕ ಸಂದೇಶ್
ಜವಳಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ
ನೀಡಿದರು.
19ರಂದು ಸಂಜೆ 6.45ಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಭೀಮಸೇನ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸುವರು. ರಂಗ ಸಮಾಜದ ಸದಸ್ಯರಾದ ಆರ್.ಎಸ್.ಹಾಲಸ್ವಾಮಿ ಹಾಗೂ ಪ್ರಭುಕಪ್ಪಗಲ್ ಭಾಗವಹಿಸುವರು ಎಂದರು.
ಬೇಲೂರು ರಘುನಂದನ್ ರಚನೆಯ ‘ಹತ್ಯಾಕಾಂಡ’ ನಾಟಕಕ್ಕೆ ಪ್ರಸನ್ನ ವೈದ್ಯ ಮತ್ತು ರಾಘವೇಂದ್ರ ಪ್ರಭು ಸಂಗೀತ ನಿರ್ವಹಣೆ, ವಸ್ತ್ರ ವಿನ್ಯಾಸ ಮಾಡುವರು. ಪ್ರಶಾಂತ್ ಕುಮಾರ್ ಪರಿಕರ ನಿರ್ಮಾಣ, ಶಂಕರ್ ಕೆ. ಬೆಳಲಕಟ್ ಬೆಳಕಿನ ನಿರ್ವಹಣೆ ಮಾಡುವರು. ರಂಜಿತ ವಸ್ತ್ರವಿನ್ಯಾಸಕ್ಕೆ ಸಹಕರಿಸುವರು. ರಂಗಾಯಣ ಕಲಾವಿದರಾದ ಪ್ರಸನ್ನಕುಮಾರ್, ನಿತಿನ್, ರವಿಕುಮಾರ್, ಸುಜಿತ್ ಕಾರ್ಕಳ, ಚಂದನ್, ಶರತ್ ಬಾಬು, ಮಹಾಬಲೇಶ್ವರ್, ಸವಿತಾ ಆರ್. ಕಾಳಿ, ರಂಜಿತ, ದೀಪ್ತಿ, ಕಾರ್ತಿಕ ಕಲ್ಲುಕುಟಿಕರ್ ಅಭಿನಯಿಸುವರು ಎಂದು ವಿವರ ನೀಡಿದರು.
ಪ್ರವೇಶ ದರ ₹ 30 ನಿಗದಿಮಾಡಲಾಗಿದೆ. ಮಾಹಿತಿಗೆ 08182– 256353 ಸಂಪರ್ಕಿಸಬಹುದು ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ರಂಗ ಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ, ರಂಗ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.