ADVERTISEMENT

ಜಿಲ್ಲೆಯಲ್ಲಿ 2,900 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ

ಹಬ್ಬದ ಶಾಂತಿಯುತ ಆಚರಣೆಗೆ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 19:36 IST
Last Updated 1 ಸೆಪ್ಟೆಂಬರ್ 2019, 19:36 IST
ಕೆ.ಎನ್.ಶಾಂತರಾಜು
ಕೆ.ಎನ್.ಶಾಂತರಾಜು   

ಶಿವಮೊಗ್ಗ: ಗೌರಿ ಗಣೇಶ ಹಬ್ಬ ಹಾಗೂ ಮೊಹರಂ ಹಬ್ಬದ ಶಾಂತಿಯುತ ಆಚರಣೆಗಾಗಿಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎನ್. ಶಾಂತರಾಜು ತಿಳಿಸಿದರು.

ಜಿಲ್ಲೆಯಲ್ಲಿ2,900 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಶಿವಮೊಗ್ಗ ವಿಭಾಗದಲ್ಲಿ 800ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಕೂರಿಸಲಾಗುತ್ತಿದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸೆ.2ರಂದು 170, 3ರಂದು 29, 4ರಂದು 1,035 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತಿದೆ. ವಿಸರ್ಜನೆ ವೇಳೆ ಭದ್ರತೆ ಒದಗಿಸಲಾಗುವುದು ಎಂದರು.

ADVERTISEMENT

ಗಣಪತಿ ಮಂಡಳಿಯವರು ಒತ್ತಾಯಪೂರ್ವಕವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಬಾರದು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ, ಧ್ವನಿವರ್ಧಕ ಬಳಕೆಗೆ ಎಸ್‌ಡಿಪಿಒ, ಸಿಪಿಐ ಕಚೇರಿಯಲ್ಲಿ ಸ್ಥಾಪಿಸಿರುವ ಸಿಂಗಲ್ ವಿಂಡೋದಲ್ಲಿ ಅನುಮತಿ ಪತ್ರ ಪಡೆಯಬೇಕು. ಬೆಂಕಿ ಅವಘಡ ತಡೆಗಟ್ಟುವ ಸಲುವಾಗಿ ಆಕಸ್ಮಿಕ ಬೆಂಕಿ ಆರಿಸುವ ಸಲಕರಣೆಗಳಾದ ಮರಳು ಮತ್ತು ನೀರು ತುಂಬಿದ ಬಕೆಟ್, ಫೈರ್ ಎಕ್ಸ್‌ಟಿಂಗಿಷರ್ ಇಟ್ಟುಕೊಳ್ಳಬೇಕು. ಮನರಂಜನಾ ಕಾರ್ಯಕ್ರಮದಲ್ಲಿ ಸ್ವಯಂಸೇವಕರನ್ನು ನೇಮಿಸಿ ಗುಂಪನ್ನು ನಿಯಂತ್ರಿಸಬೇಕು. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಬೇಕು ಎಂದುಗಣೇಶ ಮಂಡಳಿ, ಸಂಘಟಕರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದರು.

ಗಣಪತಿ ವಿಸರ್ಜನಾ ಮಾರ್ಗ ಸುಸ್ಥಿತಿಯಲ್ಲಿರುವ ಬಗ್ಗೆ ಮುಂಚಿತವಾಗಿ ಖಚಿತಪಡಿಸಿಕೊಳ್ಳಬೇಕು. ಪೂರ್ವ ನಿಗದಿತ ಮಾರ್ಗದಲ್ಲಿಯೇ ವಿಸರ್ಜನಾ ಮೆರವಣಿಗೆ ಸಾಗುವಂತೆ ಕ್ರಮಕೈಗೊಳ್ಳಬೇಕು. ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾನಮತ್ತರನ್ನು, ಮಾರಕಾಸ್ತ್ರ ಹೊಂದಿರುವವರನ್ನು ನಿಗಾವಹಿಸಿ ಅಂತವರನ್ನು ಮೆರವಣಿಗೆಯಿಂದ ಹೊರಹಾಕಬೇಕೆಂದು ಗಣೇಶ ಮಂಡಳಿಯವರಿಗೆ ಸೂಚಿಸಿದರು.

ಪ್ರಚೋದನಕಾರಿ ಘೋಷಣೆ, ಗೀತೆ, ಭಾಷಣಗಳನ್ನು ಮಾಡಬಾರದು, ಧಾರ್ಮಿಕ ಕಟ್ಟಡಗಳ ಮೇಲೆ ಅನಗತ್ಯವಾಗಿ ಬಾವುಟ ಮತ್ತು ಬ್ಯಾನರ್‌ಗಳನ್ನು ಕಟ್ಟದಂತೆ ನಿಷೇಧಿಸಲಾಗಿದೆ. ಸಣ್ಣಪುಟ್ಟ ಘಟನೆಗಳು ನಡೆದರೆ ಕೂಡಲೇ ಸ್ಥಳೀಯ ಪೊಲೀಸರಿಗೆ ಮತ್ತು ಜಿಲ್ಲಾ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಪ್ರಮುಖ ಗಣಪತಿ ಮಂಡಳಿಯವರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು. ಸಿಡಿಮದ್ದು, ಪಟಾಕಿ ಮುಂತಾದವುಗಳನ್ನು ಸಿಡಿಸುವಾಗ ಅನ್ಯರಿಗೆ ತೊಂದರೆ ಕೊಡಬಾರದು. ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಿದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.