ಸಾಗರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಮಲೆಮಹದೇಶ್ವರ ಬೆಟ್ಟದಿಂದ ದೆಹಲಿಯವರೆಗೆ ಪಾದಯಾತ್ರೆ ಕೈಗೊಂಡಿರುವ ನಾಗರಾಜ ಕಲ್ಲುಕುಟಿಗರ್ ಶನಿವಾರ ಸಾಗರಕ್ಕೆ ಬಂದರು. ಸ್ವರಾಜ್ ಇಂಡಿಯಾ, ಆಮ್ ಆದ್ಮಿ ಪಕ್ಷದಿಂದ ಅವರನ್ನು ಸ್ವಾಗತಿಸಲಾಯಿತು.
ಬಳಿಕ ಮಾತನಾಡಿದ ನಾಗರಾಜ್ ಕಲ್ಲುಕುಟಿಗರ್, ‘6 ಸಾವಿರ ಕಿ.ಮೀ. ದೂರವನ್ನು ಪಾದಯಾತ್ರೆಯ ಮೂಲಕ ಕ್ರಮಿಸುವ ಉದ್ದೇಶವಿದ್ದು, ಈಗಾಗಲೇ 1,200 ಕಿ.ಮೀ ಕ್ರಮಿಸಿದ್ದೇನೆ. ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಕೃಷಿ ಕಾಯ್ದೆಯ ಅಪಾಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಾದಯಾತ್ರೆ ಕೈಗೊಂಡಿದ್ದೇನೆ’ ಎಂದರು.
‘ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕೃಷಿ ಕಾಯ್ದೆಗೆ ತಿದ್ದುಪಡಿ ತಂದಿರುವುದರ ಹಿಂದೆ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿ ಕಂಪನಿಗೆ ವಹಿಸುವ ಹುನ್ನಾರ ಅಡಗಿದೆ. ಈ ಕಾರಣದಿಂದಲೇ ಕೃಷಿಭೂಮಿ, ಕೃಷಿ ಉತ್ಪನ್ನಗಳ ಮಾರಾಟದ ಮೇಲಿದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಇದರಿಂದ ಉಂಟಾಗುವ ಅಪಾಯಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಬೇಕಿದೆ’ ಎಂದು ಹೇಳಿದರು.
‘ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ನನಗೆ ಪಾದಯಾತ್ರೆ ಮೂಲಕ ಗ್ರಾಮಗಳಿಗೆ ತೆರಳಿದ ಸಂದರ್ಭಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ಜುಲೈ ಅಂತ್ಯದ ವೇಳೆಗೆ ದೆಹಲಿ ತಲುಪುವ ನಿರೀಕ್ಷೆ ಇದೆ’ ಎಂದರು.
ಸ್ವರಾಜ್ ಇಂಡಿಯಾದ ಎನ್.ಡಿ. ವಸಂತ ಕುಮಾರ್, ಶಿವಾನಂದ ಕುಗ್ವೆ, ಆಮ್ ಆದ್ಮಿ ಪಕ್ಷದ ಅಮೃತ್ ರಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.