ತೀರ್ಥಹಳ್ಳಿ: ಸನಾತನ ಧರ್ಮದ ಮೌಲ್ಯಗಳನ್ನು ಸಂರಕ್ಷಣೆ ಮಾಡುವ ಸಮರ್ಥ ನಾಯಕತ್ವ ದೇಶದಲ್ಲಿದೆ. ಹಿಂದೂ ಧರ್ಮದ ಬೇರುಗಳು ಗಟ್ಟಿಯಾಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಇಲ್ಲಿನ ರಥಬೀದಿಯಲ್ಲಿರುವ ರಾಮಚಂದ್ರಾಪುರ ಶಾಖಾ ಮಠದಲ್ಲಿ ಭಾನುವಾರ ನಡೆದ ನರಸಿಂಹ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜನಿವಾರ, ಶಿವದಾರ ತುಂಡು ಮಾಡುವ ಕೀಟಲೆಯನ್ನು ಹಿಂದೂ ಸಮಾಜ ಲಘುವಾಗಿ ಕಾಣಬಾರದು. ಎಚ್ಚರಿಕೆ ನೀಡದಿದ್ದರೆ ಹಿಂದೂ ಸಮಾಜಕ್ಕೆ ಉಳಿಗಾಲವಿಲ್ಲ. ಹಿಂದೂ ಧರ್ಮಕ್ಕೆ ಅನ್ಯ ಧರ್ಮಗಳನ್ನು ದ್ವೇಷ ಮಾಡುವ ದುರುದ್ದೇಶ ಇಲ್ಲ. ಸಹೋದರತ್ವ ಭೋಧಿಸುವ ಹಿಂದೂ ಧರ್ಮ ಬೆಳೆದರೆ ಜಗತ್ತಿಗೆ ನೆರಳಾಗುತ್ತದೆ. ಸವಾಲಿನ ದಿನಗಳಲ್ಲಿ ನಮ್ಮನ್ನು ಮುನ್ನಡೆಸುವಂತಹ ಅನೇಕ ಸಂತರು ನಮ್ಮ ನಡುವೆ ಇದ್ದಾರೆ’ ಎಂದರು.
ರಾಘವೇಶ್ವರ ಭಾರತಿ ಶ್ರೀಗಳ ಸಮಾಜಮುಖಿ ಕೆಲಸ, ಅವರ ವಿದ್ವತ್ತು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದೆ. ಸಮ ಸಮಾಜ ಕಟ್ಟುವ ಹಿಂದೂ ಧರ್ಮವನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಹೊರನಾಡು ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.