ADVERTISEMENT

ಶಿಥಿಲಗೊಂಡ ಕಟ್ಟಡದ ಒಳಗೇ ಸಿಬ್ಬಂದಿ ಕಾರ್ಯ

ಬೀಳುವ ಸ್ಥಿತಿಯಲ್ಲಿ ಹೊಸನಗರ ಬಿಎಸ್ಎನ್ಎಲ್ ದೂರವಾಣಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 7:36 IST
Last Updated 14 ಸೆಪ್ಟೆಂಬರ್ 2021, 7:36 IST
ಪಟ್ಟಣದ ಹೃದಯ ಭಾಗದಲ್ಲಿರುವ ಬಿಎಸ್ಎನ್ಎಲ್ ದೂರವಾಣಿ ಕೇಂದ್ರದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ
ಪಟ್ಟಣದ ಹೃದಯ ಭಾಗದಲ್ಲಿರುವ ಬಿಎಸ್ಎನ್ಎಲ್ ದೂರವಾಣಿ ಕೇಂದ್ರದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ   

ಹೊಸನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಬಿಎಸ್ಎನ್ಎಲ್ ದೂರವಾಣಿ ಕೇಂದ್ರದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಅಲ್ಲಿನ ಸಿಬ್ಬಂದಿ ಜೀವ ಭಯದಲ್ಲಿ ನಿತ್ಯವೂ ಕೆಲಸ ಮಾಡುತ್ತಿದ್ದಾರೆ.

ಹಲವು ದಶಕಗಳ ಹಿಂದೆ ನಿರ್ಮಾಣವಾದ ಈ ಕಟ್ಟಡ ನಿರ್ವಹಣೆ ಇಲ್ಲದೆ ಸಂಪೂರ್ಣ ಶಿಥಿಲಗೊಂಡಿದೆ. ಬೀಳುವ ಹಂತಕ್ಕೆ ತಲುಪಿದೆ. ಇದು ಮಲೆನಾಡು ಪ್ರದೇಶವಾದ ಕಾರಣ ಪ್ರತಿವರ್ಷ ಕಟ್ಟಡದ ನಿರ್ವಹಣೆ ಅನಿವಾರ್ಯ. ಆದರೆ, ಇಲಾಖೆಯ ಮೇಲಧಿಕಾರಿಗಳು ಗಮನ ಹರಿಸುತ್ತಿಲ್ಲ ಎನ್ನುವುದು ಸಿಬ್ಬಂದಿ ಅಳಲು.

ಕಟ್ಟಡದ ಒಳಭಾಗ ಸಂಪೂರ್ಣ ಸೋರುತ್ತಿದೆ. ಗೋಡೆಯ ಚಾವಣಿಯೂ ಹಾಳಾಗಿದೆ. ವಿದ್ಯುತ್ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕಿಟ್ ಸಂಭವಿಸುವ ಸಾಧ್ಯತೆಗಳಿವೆ. ಕಟ್ಟಡದ ಒಳಭಾಗದಲ್ಲಿ ಮರಗಳ ಬೇರುಗಳು ಬೆಳೆದು ಗೋಡೆಗಳು ಬಿರುಕು ಬಿಟ್ಟಿವೆ.

ADVERTISEMENT

ಅತಿಯಾದ ಮಳೆಯಿಂದಾಗಿ ಕಟ್ಟಡದ ಒಳ ಭಾಗ ನೀರಿನಿಂದ ಜಲಾವೃತಗೊಂಡಿದೆ. ಇಲಾಖೆಗೆ ಸಂಬಂಧಪಟ್ಟ ಕಡತಗಳು ಒದ್ದೆಯಾಗಿವೆ. ಕಟ್ಟಡಕ್ಕೆ ಬಣ್ಣ ಬಳಿಯದೆ ಬಹಳಷ್ಟು ವರ್ಷಗಳಾಗಿವೆ. ಕಟ್ಟಡದ ಸುತ್ತಮುತ್ತ 5 ಅಡಿಗಳಿಗಿಂತ ಎತ್ತರದ ಗಿಡಗಳು ಬೆಳೆದು ನಿಂತಿವೆ. ನಿತ್ಯ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.

ಕಟ್ಟಡ ದುರಸ್ತಿಯ ಮನವಿಗಿಲ್ಲ ಸ್ಪಂದನೆ: ಕಳೆದ ವರ್ಷ ಕಟ್ಟಡ ಶಿಥಿಲಗೊಂಡಿತ್ತು. ದುರಸ್ತಿ ಮಾಡುವಂತೆ ಬಿಎಸ್ಎನ್ಎಲ್ ಉಪ ಪ್ರಧಾನ ವ್ಯವಸ್ಥಾಪಕರಿಗೆ ದಾಖಲೆಗಳ ಸಮೇತ ಮನವಿ ಮಾಡಲಾಗಿತ್ತು. ಆದರೆ ಇದುವರೆಗೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯ ಅಧಿಕಾರಿಗಳು.

ಅಕ್ರಮ ಚಟುವಟಿಕೆಗಳ ತಾಣ: ದೂರವಾಣಿ ಕೇಂದ್ರದ ಸುತ್ತ ಕಾಂಪೌಂಡ್ ವ್ಯವಸ್ಥೆ ಇಲ್ಲ. ಮರ, ಗಿಡ, ಪೊದೆಗಳು ಬೆಳೆದು ನಿಂತಿವೆ. ಈ ಜಾಗ ಕುಡುಕರ, ಜೂಜುಕೋರರ ತಾಣವಾಗಿದೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಕಟ್ಟಡದ ಸುತ್ತಮುತ್ತಲು ರಾಶಿರಾಶಿ ಮದ್ಯದ ಬಾಟಲಿಗಳು ಕಾಣಸಗುತ್ತವೆ.

‘ಕಟ್ಟಡದ ಸ್ಥಿತಿಯ ಕುರಿತು ಈಗಾಗಲೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕೂಡಲೇ ಸರಿಪಡಿಸಬೇಕಾಗಿದೆ. ನಿತ್ಯವೂ ಜೀವ ಭಯದೊಂದಿಗೆ ಕೆಲಸ ನಿರ್ವಹಿಸುತ್ತಿದ್ದೇವೆ’ ಎನ್ನುತ್ತಾರೆ ‌ ಹೊಸನಗರದ ಕಿರಿಯ ದೂರವಾಣಿ ಅಧಿಕಾರಿ ಸುಲೇಖ್‌ ಪದ್ಮನಾಭನ್.

‘ಕಟ್ಟಡ ದುರಸ್ತಿಗೆ ನೆರವು ಕೋರಿ ಅನುಮೋದನೆ ಕಳುಹಿಸಲಾಗಿದೆ. ತಾತ್ಕಾಲಿಕ ದುರಸ್ತಿ ಕಾರ್ಯ ಶೀಘ್ರ ಆರಂಭವಾಗಲಿದೆ’ ಎನ್ನುತ್ತಾರೆ ಬಿಎಸ್ಎನ್ಎಲ್ ಉಪ ಪ್ರಧಾನ ವ್ಯವಸ್ಥಾಪಕ ವೆಂಕಟೇಶ್.

‘ನೆಟ್‌ವರ್ಕ್‌ ಸಿಗದೆ ತಾಲ್ಲೂಕಿನ ಜನರು ಬೆಟ್ಟ, ಗುಡ್ಡಗಳನ್ನು ಏರುವ ಸ್ಥಿತಿ ಇದೆ. ಈ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಿಗುತ್ತದೆ. ತಾಂತ್ರಿಕ ಸಮಸ್ಯೆ ಎದುರಾದರೆ
ಹಲವು ದಿನಗಳು ಕಾಯಬೇಕು. ಕಟ್ಟಡದಿಂದ ಇರುವ ಸಿಬ್ಬಂದಿಗೆ ತೊಂದರೆಯಾದರೆ ಇರುವ ಸೌಲಭ್ಯಗಳೂ ದೊರಕುವುದಿಲ್ಲ’ ಎನ್ನುವುದು ಸಾರ್ವಜನಿಕರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.