ADVERTISEMENT

ಸೊರಬ: ಕುಟುಂಬದ ಯಶಸ್ಸಿನಲ್ಲಿ ಮಹಿಳೆ ಪಾತ್ರ ಹಿರಿದು

ಜಡೆ ಸಂಸ್ಥಾನ ಮಠದಲ್ಲಿ ಸಿದ್ಧವೃಷಭೇಂದ್ರ ಜಾತ್ರಾ ಮಹೋತ್ಸವದಲ್ಲಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 7:20 IST
Last Updated 5 ಫೆಬ್ರುವರಿ 2023, 7:20 IST
ಸೊರಬ ತಾಲ್ಲೂಕಿನ ಜಡೆ ಗ್ರಾಮದ ಮುರುಘಾ ಮಠದ ಆವರಣದಲ್ಲಿ ಸಿದ್ಧವೃಷಭೇಂದ್ರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಮಹಿಳಾ ಗೋಷ್ಠಿಯನ್ನು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು.
ಸೊರಬ ತಾಲ್ಲೂಕಿನ ಜಡೆ ಗ್ರಾಮದ ಮುರುಘಾ ಮಠದ ಆವರಣದಲ್ಲಿ ಸಿದ್ಧವೃಷಭೇಂದ್ರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಮಹಿಳಾ ಗೋಷ್ಠಿಯನ್ನು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು.   

ಸೊರಬ: ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರನ್ನು ನಿಕೃಷ್ಟವಾಗಿ ನೋಡುವ ಮನಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಮಠ, ಮಂದಿರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಶನಿವಾರ ತಾಲ್ಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಸಿದ್ಧವೃಷಭೇಂದ್ರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕುಟುಂಬದ ಯಶಸ್ಸಿನಲ್ಲಿ ಸಮರ್ಥವಾಗಿ ತನ್ನ ಪಾತ್ರವನ್ನು ನಿಭಾಯಿಸುವ ಮಹಿಳೆಯನ್ನು ಅಗೌರವದಿಂದ ನೋಡುವುದು ಸರಿಯಲ್ಲ. ಮನೆಗೂ ಮನೆಯೊಡತಿಗೂ ಅವಿನಾಭ ಸಂಬಂಧವಿದೆ ಎಂದು ತಿಳಿಸಿದರು.

ADVERTISEMENT

‘400 ವರ್ಷಗಳ ಹಿಂದೆ ಭಕ್ತ ಸಮೂಹದ ಮೇಲೆ ಜಡೆ ಮಠದ ಸಿದ್ಧವೃಷಭೇಂದ್ರ ಸ್ವಾಮೀಜಿ ಪ್ರಭಾವ ಬೀರಿದ್ದರು. ಸರ್ಕಾರ ಮಾಡದಿರುವ ಕೆಲಸವನ್ನು ವಿದ್ಯೆ, ದಾಸೋಹದ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸುತ್ತಿರುವ ಕಾರ್ಯಗಳನ್ನು ಮಠಗಳು ಮಾಡುತ್ತಿವೆ. ಬಳ್ಳಿಗಾವಿ, ಉಡುತಡಿ ಸ್ಥಳಗಳು ಮಲೆನಾಡಿನ ಶಕ್ತಿ ಕೇಂದ್ರಗಳಾಗಿವೆ. ಅವುಗಳ ಸಮಗ್ರ ಅಭಿವೃದ್ಧಿ ಕಾರ್ಯ ನಡೆದರೆ ಮಲೆನಾಡಿನ ಧಾರ್ಮಿಕ, ಸಾಮಾಜಿಕ ಇತಿಹಾಸಕ್ಕೆ ಮುನ್ನುಡಿಯಾಗಲಿದೆ’ ಎಂದರು.

‘ಮಠಗಳು ಧರ್ಮ ಆಚರಣೆಗೆ ಸೀಮಿತವಾಗದೆ ಚಿಂತನ, ಮಂಥನ, ಭಾವೈಕ್ಯದ ಬಗ್ಗೆ ಚರ್ಚೆ ಆಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. 12ನೇ‌ ಶತಮಾನದಲ್ಲಿ ಬಸವಣ್ಣ ಸಾಮಾಜಿಕ ಕ್ರಾಂತಿ ಜೊತೆಗೆ ಸಾಂಸ್ಕೃತಿಕ ಕ್ರಾಂತಿ ಬೀರಿದರು. ಬಸವ ಧರ್ಮವೇ ನಿಜವಾದ ಮಾನವ ಧರ್ಮ ಎಂದು ವಿಶ್ವಕ್ಕೆ ಪರಿಚಯಿಸಿದರು. ಲಿಂಗ ಸಮಾನತೆ ಬಗ್ಗೆ ಹೆಚ್ಚು ಬೆಳಕು ಚೆಲ್ಲಿದ ಶರಣರು ಸಮಾನತೆಗಾಗಿ ಹೋರಾಟ‌ ನಡೆಸಿದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

‘ಬಹು ಸಂಸ್ಕೃತಿ ಹೊಂದಿರುವ ನಾಡಿನಲ್ಲಿ ಮಹಿಳೆಯರ ಪಾತ್ರ ಹಿರಿದು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೂ ವಿಶೇಷ ಸ್ಥಾನಮಾನಗಳು ದೊರೆಯುತ್ತಿರುವುದು ಸಮಾಧಾನದ ಸಂಗತಿಯಾಗಿದೆ’ ಎಂದು ತಿಳಿಸಿದರು.

ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ಶಿವಮೊಗ್ಗದ ಬಸವಕೇಂದ್ರ ಬಸವ ಮರುಳಸಿದ್ಧ ಸ್ವಾಮೀಜಿ, ಜಡೆ ಹಿರೇಮಠದ ಘನಬಸವ ಅಮರೇಶ್ವರ ಸ್ವಾಮೀಜಿ, ದುಗ್ಲಿ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಚಲನಚಿತ್ರ ನಿರ್ದೇಶಕ ಲಿಂಗದೇವರು, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ, ಮಡಿವಾಳ ಮಾಚಿದೇವ ನಿಗಮದ ಅಧ್ಯಕ್ಷ ರಾಜು ಎಂ.ತಲ್ಲೂರು, ದಂತ ವೈದ್ಯ ಡಾ.ಎಚ್.ಇ. ಜ್ಞಾನೇಶ್, ಬಾಬು ನಾಯ್ಕ, ಶಿರಸಿ ಎಪಿಎಂಸಿ ಅಧ್ಯಕ್ಷ ಪ್ರಶಾಂತ್ ಸಂಪಳ್ಳಿ, ಅಶೋಕ್ ನಾಯ್ಕ್, ವಿಜೇಂದ್ರಗೌಡ ತಲಗುಂದ, ಲೋಲಾಕ್ಷಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.