ಶಿಕಾರಿಪುರ: ಧಾರ್ಮಿಕ ಹಾಗೂ ಶಿಲ್ಪಕಲೆ ಕ್ಷೇತ್ರಕ್ಕೆ ಅಮರಶಿಲ್ಪಿ ಜಕಣಾಚಾರಿ ನೀಡಿದ ಕೊಡುಗೆ ಅಪಾರ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ವಿಶ್ವಕರ್ಮ ಸಮಾಜ ಆಶ್ರಯದಲ್ಲಿ ಶನಿವಾರ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದ ಶಿಲ್ಪಕಲೆಗೆ ಕೊಡುಗೆ ನೀಡುವಲ್ಲಿ ವಿಶ್ವಕರ್ಮ ಸಮಾಜದ ಪಾತ್ರ ಮಹತ್ವದ್ದು. ಜಕಣಾಚಾರಿ ಅವರು ತಮ್ಮ ಪ್ರತಿಭೆಯಿಂದ ಸುಂದರದೇವರ ಮೂರ್ತಿಗಳನ್ನು ಕೆತ್ತಿದ್ದಾರೆ. ಆ ಮೂರ್ತಿಗೆ ನಾವು ಇಂದು ಪೂಜೆ
ಸಲ್ಲಿಸುತ್ತಿದ್ದೇವೆ’ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲಾ ಸಮಾಜಕ್ಕೂ ಗೌರವ ತರುವ ರೀತಿ ಆಡಳಿತ ನಡೆಸಿದ್ದು ಪ್ರಶಂಸನೀಯ ಎಂದರು.
ಉಪನ್ಯಾಸಕ ಕೆ.ಎಚ್. ಪುಟ್ಟಪ್ಪ, ‘ಜಕಣಾಚಾರಿ ಭೂಮಂಡಲಕ್ಕೆ ಪ್ರಧಾನ ಶಿಲ್ಪಿ. ಕಲ್ಲಿಗೆ ಜೀವ ಕೊಟ್ಟ ಮಹಾನ್ ಶಿಲ್ಪಿ’ ಎಂದು ಶ್ಲಾಘಿಸಿದರು.
ತಹಶೀಲ್ದಾರ್ ಎಂ.ಪಿ. ಕವಿರಾಜ್, ಎಪಿಎಂಸಿ ರಾಜ್ಯ ಉಪಾಧ್ಯಕ್ಷ ಚುರ್ಚಿಗುಂಡಿ ರುದ್ರಮುನಿ, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ರೇಣುಕಾಸ್ವಾಮಿ, ಮುಖ್ಯಾಧಿಕಾರಿ ಸುರೇಶ್, ಉಪತಹಶೀಲ್ದಾರ್ ಮಂಜುನಾಥ್, ಬೆಳಗುತ್ತಿ ಮಠದ ಸರಳಮ್ಮ, ತಾಲ್ಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ್ ಆಚಾರ್, ಮುಖಂಡರು
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.