ಕೋಣಂದೂರು: ಬುಧವಾರ ರಾತ್ರಿ ಮತ್ತು ಗುರುವಾರ ಬೆಳಿಗ್ಗೆ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಸಾಗರ -ತೀರ್ಥಹಳ್ಳಿ ಮಾರ್ಗದ ಶಂಕರಳ್ಳಿಯ ರೇಮ ನಾಯ್ಕ ಅವರಿಗೆ ಸೇರಿದ ತೆಂಗಿನ ಮರ ರಸ್ತೆಗೆ ಬಿದ್ದ ಪರಿಣಾಮ ಸಂಚಾರ ಕೆಲ ಕಾಲ ಅಸ್ತವ್ಯಸ್ತವಾಗಿತ್ತು.
ಮರ ಬಿದ್ದ ರಭಸಕ್ಕೆ ಐದಾರು ವಿದ್ಯುತ್ ಕಂಬಗಳು ಮುರಿದಿವೆ. ಇದರಿಂದಾಗಿ ಸಂಚಾರ ಅಸ್ತವ್ಯಸ್ತ ವಾಗಿತ್ತು. ವಾಹನಗಳು ಹುಂಚದಕಟ್ಟೆ, ಮುನಿಯೂರು ಮಾರ್ಗದಲ್ಲಿ ಸಂಚರಿಸಿದವು. ಅದೇ ರಸ್ತೆಯ ತುಸು ಅಂತರದಲ್ಲಿ ಸರಕು ತುಂಬಿದ ಲಾರಿಯೊಂದು ರಸ್ತೆಯ ಪಕ್ಕಕ್ಕೆ ಜಾರಿದ್ದು, ಹೊರತೆಗೆಯಲು ಪ್ರಯಾಸ ಪಡಬೇಕಾಯಿತು.
ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ತಾಲ್ಲೂಕು ಆಡಳಿತ ರಜೆ ಘೋಷಣೆ ಮಾಡಿತ್ತು. ಮಧ್ಯಾಹ್ನದ ತನಕ ಜೋರಾಗಿ ಸುರಿದ ಮಳೆ ನಂತರ ಕೊಂಚ ವಿರಾಮ ನೀಡಿತ್ತು. ಮುಂಗಾರಿನ ರಭಸಕ್ಕೆ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಎಲೆ ಚುಕ್ಕೆ ಮತ್ತು ಕೊಳೆ ರೋಗ ಬರುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಅತಿಯಾದ ಮಳೆಯಿಂದ ಭತ್ತದ ಸಸಿಮಡಿ ಹಾಕುವ ಕಾರ್ಯ ಮುಂದೂಡಲಾಗಿದೆ. ಶುಂಠಿ, ತರಕಾರಿ ಬೆಳೆಗಳು ಸಹ ಕೊಳೆಯುವ ಭೀತಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.